ಬೆಂಗಳೂರು, ನ 08(DaijiworldNews/MS): "ನೋಟ್ ಬ್ಯಾನ್ ಎಂಬ ರಾಷ್ಟ್ರೀಯ ದುರಂತ ಸಂಭವಿಸಿ ಇಂದಿಗೆ 6 ವರ್ಷ. ಸಂಭ್ರಮಾಚರಣೆ ನಡೆಸುವುದಿಲ್ಲವೇ " ಎಂದು ಕಾಂಗ್ರೆಸ್ ಬಿಜೆಪಿಯನ್ನು ಪ್ರಶ್ನಿಸಿದೆ.
ನೋಟ್ ಬ್ಯಾನ್ ಮಾಡಿ ಆರು ವರ್ಷವಾದ ಹಿನ್ನಲೆ ಸರಣಿ ಟ್ವೀಟ್ ಮಾಡಿದ ಕಾಂಗ್ರೆಸ್ "ನೋಟ್ ಬ್ಯಾನ್ ಮೂಲಕ 'ಕ್ಯಾಶ್ ಲೆಸ್ ಎಕಾನಮಿ' ಮಾಡಿಬಿಡುತ್ತೇವೆ ಎಂದಿದ್ದ ಬಿಜೆಪಿ ಈಗ ಜನರಲ್ಲಿ ನಗದು ಬಳಕೆ ಹೆಚ್ಚಳವಾಗಿದ್ದಕ್ಕೆ ಮಾತಾಡುತ್ತಿಲ್ಲವೇಕೆ? ನೋಟ್ ಬ್ಯಾನ್ ಮೊದಲಿಗಿಂತ ಈಗ 71% ನಷ್ಟು ನಗದು ಬಳಕೆ ಹೆಚ್ಚಿರುವುದೇಕೆ? ನೋಟ್ ಬ್ಯಾನ್ ಉದ್ದೇಶದ ಬಗ್ಗೆ, ವೈಫಲ್ಯ ಬಗ್ಗೆ ರಾಜ್ಯ ಬಿಜೆಪಿ ಮಾತಾಡಲು ಹಿಂಜರಿಯುತ್ತಿರುವುದೇಕೆ" ಎಂದು ಕೇಳಿದೆ.
ನೋಟ್ ಬ್ಯಾನ್ ಕಪ್ಪು ಹಣವನ್ನು ಮಟ್ಟ ಹಾಕಲು ಕೈಗೊಂಡ ದಿಟ್ಟ ನಿರ್ಧಾರ ಎಂದಿತ್ತು ಬಿಜೆಪಿ.ಸ್ವಿಸ್ ಬ್ಯಾಂಕಿನಲ್ಲಿ ಭಾರತೀಯರ ಠೇವಣಿ ಏರಿಕೆಯಾಗಿದೆ, ಕಳೆದ 13 ವರ್ಷದಲ್ಲೇ ಹೆಚ್ಚು ಹಣ ಸ್ವಿಸ್ ಬ್ಯಾಂಕಿಗೆ ಹೋಗಿದೆ ಎಂಬ ವರದಿಗೆ ಬಿಜೆಪಿ ಬಾಯಿ ಬಿಡದಿರುವುದೇಕೆ? ಭಾರತೀಯರ ಬದುಕು ಕಸಿದ ನೋಟ್ ಬ್ಯಾನ್ನಿಂದಾದ ಲಾಭವೇನು ಎಂದು ಕಾಂಗ್ರೆಸ್ ಕಿಡಿಕಾರಿದೆ.
ನೂರಾರು ಜನರ ಜೀವ ಬಲಿ, ಅರ್ಥ ವ್ಯವಸ್ಥೆ ಬುಡಮೇಲು,ಸಿಗದ ಕಪ್ಪು ಹಣ,ನಿಲ್ಲದ ಭ್ರಷ್ಟಾಚಾರ,ಉದ್ದಿಮೆಗಳಿಗೆ ಬೀಗ,ಆಗದ ಕ್ಯಾಶ್ಲೆಸ್ ಎಕಾನಮಿ,ದೇಶ ಅಪ್ರಬುದ್ಧರ ಕೈಗೆ ಸಿಕ್ಕು ನಲುಗುತ್ತಿರುವುದಕ್ಕೆ ಸಾಕ್ಷಿ ಇದು ಎಂದು ಆರೋಪಿಸಿದೆ.