ಹುಬ್ಬಳ್ಳಿ, ನ 08 (DaijiworldNews/HR): ಬಿಜೆಪಿ ಸಂಕಲ್ಪ ಯಾತ್ರೆ ವಿಫಲವಾಗಿದ್ದು, ಜನರು ಬಿಜೆಪಿಯನ್ನು ಕಿತ್ತೊಗೆದು ಕಾಂಗ್ರೆಸ್ಗೆ ಅಧಿಕಾರ ಕೊಡಲು ಸಂಕಲ್ಪ ಮಾಡಿದ್ದಾರೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಸಂಕಲ್ಪ ಯಾತ್ರೆಗೆ ಜನರೇ ಸೇರುತ್ತಿಲ್ಲ. ಬರುವ ಅಷ್ಟು ಇಷ್ಟು ಜನರನ್ನು ಹಿಡಿದಿಡಲು ಗೇಟ್ ಗೆ ಬೀಗ ಹಾಕುವ ಸ್ಥಿತಿ ಬಿಜೆಪಿಯದ್ದಾಗಿದೆ ಎಂದರು.
ಇನ್ನು ಮುಂಬರುವ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಎಲ್ಲ ರೀತಿಯ ತಯಾರಿ ಮಾಡಿಕೊಳ್ಳುತ್ತಿದ್ದು, ಸತೀಶ ಜಾರಕಿಹೊಳಿ ನೀಡಿದ ಹಿಂದೂ ಪದ ಹೇಳಿಕೆಗೆ ಸಂಬಂಧಿಸಿದಂತೆ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಣದೀಪ ಸುರ್ಜೇವಾಲಾ ನೀಡಿರುವ ಪ್ರತಿಕ್ರಿಯೆಯೇ ನನ್ನ ನಿಲುವಾಗಿದೆ ಎಂದಿದ್ದಾರೆ.