ನವದೆಹಲಿ, ನ 08 (DaijiworldNews/DB): ದಾವೂದ್ ಇಬ್ರಾಹಿಂನ ಗ್ಯಾಂಗ್ ಡಿ ಕಂಪೆನಿಯು ಭಾರತ ವಿರೋಧಿ ಪಿತೂರಿ ನಡೆಸಲೆಂದೇ ಗಲಭೆ ಕೋಶವನ್ನು ರಚನೆ ಮಾಡಿದೆ ಎಂಬ ಆಘಾತಕಾರಿ ಮಾಹಿತಿಯು ಎನ್ಐಎ ಸಲ್ಲಿಸಿದ ಚಾರ್ಜ್ಶೀಟ್ನಲ್ಲಿ ಬಹಿರಂಗಗೊಂಡಿದೆ.
ರಾಷ್ಟ್ರೀಯ ತನಿಖಾ ಸಂಸ್ಥೆಯು ದಾವೂದ್ ಇಬ್ರಾಹಿಂನ ಡಿ ಕಂಪೆನಿ ಗ್ಯಾಂಗ್ ವಿರುದ್ದ ಹೊಸ ಚಾರ್ಜ್ಶೀಟ್ ಸಲ್ಲಿಸಿದ್ದು, ಇದರಲ್ಲಿ ಭಾರತದ ದೆಹಲಿ, ಮುಂಬೈ ಸೇರಿದಂತೆ ವಿವಿಧ ನಗರಗಳ ಮೇಲೆ ದಾಳಿಗೆ ಸಂಚು ನಡೆಸಲು ಉದ್ದೇಶಿಸಿತ್ತು. ಅಲ್ಲದೆ ಇದಕ್ಕಾಗಿ ಭಾರತದಲ್ಲಿ ಗಲಭೆ ಕೋಶವನ್ನೂ ರಚಿಸಿಕೊಂಡಿತ್ತು ಎಂಬ ಅಂಶ ಬಯಲಾಗಿದೆ.
ಪಾಕಿಸ್ತಾನವನ್ನೇ ತನ್ನ ಅಡಗುದಾಣ ಮಾಡಿಕೊಂಡು ದಾವೂದ್ ಭಾರತದ ವಿರುದ್ದ ಪಿತೂರಿಯಲ್ಲಿ ತೊಡಗಿದ್ದಾನೆ. ಇದನ್ನು ರಹಸ್ಯವಾಗಿ ಕಾರ್ಯಗತಗೊಳಿಸಲು ಯೋಜನೆಗಳನ್ನು ರೂಪಿಸಿಕೊಂಡಿದ್ದಾನೆ ಎನ್ನಲಾಗಿದೆ.