ಶಿಮ್ಲಾ, ನ 08(DaijiworldNews/MS): ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ನಡೆಸುತ್ತಿರುವ 'ಭಾರತ್ ಜೋಡೊ ಯಾತ್ರೆ'ಯ ಬಗ್ಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ವ್ಯಂಗ್ಯವಾಡಿದ್ದು, ರಾಹುಲ್ ಗಾಂಧಿ ಅವರು ಅಮೇಥಿ ಲೋಕಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿದಾಗಿನಿಂದಲೂ ದೇಶದಾದ್ಯಂತ ಓಡುತ್ತಲೇ ಇದ್ದಾರೆ ಎಂದು ಹೇಳಿದ್ದಾರೆ.
ಹಿಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಭದ್ರಕೋಟೆಯಾದ ಅಮೇಥಿಯಲ್ಲಿ ಇರಾನಿ ವಿರುದ್ಧ ಸೋತಿದ್ದರು, ಆದರೆ ಇನ್ನೊಂದು ಕ್ಷೇತ್ರವಾದ ಕೇರಳದ ವಯನಾಡ್ನಿಂದ ಗೆದ್ದಿದ್ದರು.
ಇರಾನಿ ಅವರು ಹಿಮಾಚಲ ಪ್ರದೇಶ ಚುನಾವಣೆ ಹಿನ್ನೆಲೆಯಲ್ಲಿ ರೇಣುಕಾಜಿ ವಿಧಾನಸಭೆ ಕ್ಷೇತ್ರದಲ್ಲಿ ನಡೆದ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಸೋಮವಾರ ಮಾತನಾಡಿದ್ದಾರೆ. ರಾಹುಲ್ ಗಾಂಧಿ ನಡೆಸುತ್ತಿರುವ ಭಾರತ್ ಜೋಡೊ ಯಾತ್ರೆ ಕುರಿತು ಹೇಳಿಕೆ ನೀಡಿರುವ ಅವರು, 'ರಾಹುಲ್ ಗಾಂಧಿ ಹೋದ ಕಡೆಯೆಲ್ಲಾ ಪರಿಸ್ಥಿತಿ ಏನಾಗಿದೆ? ಅಲ್ಲೆಲ್ಲ ಕಾಂಗ್ರೆಸ್ ಸೋಲುತ್ತಲೇ ಬರುತ್ತಿದೆ' ಎಂದಿದ್ದಾರೆ.
ರಾಹುಲ್ ಕೇರಳದಲ್ಲಿ ಈ ಯಾತ್ರೆಯನ್ನು ಯಾರೊಂದಿಗೆ ಕೈಗೊಂಡಿದ್ದಾರೆ? ಗೋಹತ್ಯೆ ಮಾಡಿ ನಂತರ ಫೋಟೋವನ್ನು ಇಂಟರ್ನೆಟ್ನಲ್ಲಿ ಅಪ್ಲೋಡ್ ಮಾಡಿದವರೊಂದಿಗೆ ಹೆಜ್ಜೆ ಹಾಕಿ ಬೆನ್ನು ತಟ್ಟುತ್ತಿದ್ದಾರೆ," ಎಂದು ಅವರು ಕಟುವಾಗಿ ಟೀಕಿಸಿದ್ದಾರೆ.