ಬೆಂಗಳೂರು, ನ 07(DaijiworldNews/MS): "ಕಾಂಗ್ರೆಸ್ ನಲ್ಲಿದ್ದರೆ ನೀವು ಮುಖ್ಯಮಂತ್ರಿ ಆಗಲ್ಲ, ನಿಮ್ಮ ಮೇಲೆ ನಮಗೆ ಪ್ರೀತಿ ಇದೆ. ಪ್ರಧಾನ ಮಂತ್ರಿಗಳಿಗೆ ಹೇಳಿ ನಿಮ್ಮನ್ನು ಸೇರಿಸಿಕೊಳ್ಳುತ್ತೇವೆ" ಎಂದು ಸಚಿವ ಮುನಿರತ್ನ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಬಹಿರಂಗ ಆಹ್ವಾನ ಕೊಟ್ಟಿದ್ದಾರೆ. ಈ ಮೂಲಕ ಕಾಂಗ್ರೆಸ್ ನಿಂದ ಬಿಜೆಪಿಗೆ ಹೋಗಿದ್ದ 17 ಜನರಿಗೆ ಆಫರ್ ನೀಡಿದ್ದ ಡಿಕೆಶಿಗೆ ತಿರುಗೇಟು ನೀಡಿದ್ದಾರೆ.
ನಗರದಲ್ಲಿಂದು ಮಾಧ್ಯಮದೊಂದಿಗೆ ಮಾತನಾಡಿದ ಸಚಿವ ಮುನಿರತ್ನ, ನಮ್ಮ ಪಕ್ಷಕ್ಕೆ ಬಂದಿರೋ 17 ಜನರ ಮೇಲೆ ಡಿಕೆ ಶಿವಕುಮಾರ್ ಅವರೈಗೆ ಪ್ರೀತಿಯಿದೆ. ಹಾಗಾಗಿ ಆಹ್ವಾನ ನೀಡುತ್ತಿದ್ದಾರೆ. ನಮಗೂ ಡಿ.ಕೆ ಶಿವಕುಮಾರ್ ಮೇಲೆ ಪ್ರೀತಿಯಿದೆ. ಹೀಗಾಗಿ ಅವರೇ ಬೇಕಿದ್ದರೆ ಬಿಜೆಪಿಗೆ ಬರಲಿ ಎಂದು ಹೇಳಿದ್ದಾರೆ.
ಡಿ.ಕೆ ಶಿವಕುಮಾರ್ಗೆ ಕಾಂಗ್ರೆಸ್ ನಲ್ಲಿ ಭವಿಷ್ಯವಿಲ್ಲ. ಜಿ.ಪರಮೇಶ್ವರ್ ಮುಂದಿನ ದಲಿತ ಮುಖ್ಯಮಂತ್ರಿ ನಾನೇ ಅಂತಾರೆ. ಇನ್ನೊಂದೆಡೆ ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಅಂತಾರೆ. ಈ ಬಡಿದಾಟದಲ್ಲಿ ನೀವು ಮುಖ್ಯಮಂತ್ರಿ ಆಗೋದು ಡೌಟ್ ಇದೆ. ಹಾಗಾಗಿ ನೀವೆ ಬಿಜೆಪಿಗೆ ಬನ್ನಿ. ನಾವೇ ಪ್ರಧಾನಿಗೆ ಹೇಳಿ ನಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುತ್ತೇವೆ. ಡಿಕೆಶಿಗೆ ನಮ್ಮ ಪಕ್ಷಕ್ಕೆ ಬಂದರೆ ಒಳ್ಳೆದಾಗುತ್ತೆ ಎಂದು ಹೇಳಿದ್ದಾರೆ.