ಮೈಸೂರು, ನ 07(DaijiworldNews/MS): ಚೆನ್ನೈ ಎಂಜಿ ರಾಮಚಂದ್ರನ್ ಸೆಂಟ್ರಲ್ ರೈಲ್ವೇ ನಿಲ್ದಾಣದಿಂದ ಮುಂಜಾನೆ 5.50ರ ವೇಳೆಗೆ ಆರಂಭವಾದ ಚೆನ್ನೈ-ಬೆಂಗಳೂರು ಹಾಗೂ ಮೈಸೂರು ನಡುವಿನ ವಂದೇ ಭಾರತ್ ಎಕ್ಸ್ಪ್ರೆಸ್ ಪ್ರಯಾಣಿಕ ರೈಲು ಮಧ್ಯಾಹ್ನ 12.13ಕ್ಕೆ ಮೈಸೂರಿಗೆ ಆಗಮಿಸಿತು.
ಈ ವಂದೇ ಭಾರತ್ ನೋಡುವ ಕಾತರದಲ್ಲಿ ರೈಲ್ವೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ಪೊಲೀಸರು ರೈಲ್ವೆ ನಿಲ್ದಾಣದ ಒಂದನೇ ಪ್ಲಾಟ್ ಫಾರ್ಮ್ ನಲ್ಲಿ ಜಮಾಯಿಸಿದ್ದರು. ನೀಲಿ- ಬಿಳಿ ಮಿಶ್ರ ಬಣ್ಣದ ರೈಲಿನ ಎಂಜಿನ್ ಕಾಣುತ್ತಿದ್ದಂತೆ ನೆರೆದಿದ್ದವರು ಹರ್ಷೋದ್ಗಾರ ಹಾಕಿದ್ದು , ಶಿಳ್ಳೆ -ಕರತಾಡನ ಮೂಲಕ ಸ್ವಾಗತಿಸಿದರು.
ಚೆನ್ನೈ-ಮೈಸೂರು ವಂದೇ ಭಾರತ್ ಎಕ್ಸ್ಪ್ರೆಸ್ಗೆ ಪ್ರಧಾನಿ ಮೋದಿ ಅವರು ನವೆಂಬರ್ 11 ರಂದು ಚಾಲನೆ ನೀಡಲಿದ್ದಾರೆ.ಇದು ದಕ್ಷಿಣ ಭಾರತದ ಮೊದಲ ಮತ್ತು ದೇಶದ ಐದನೇ ವಂದೇ ಭಾರತ್ ರೈಲು ಆಗಿದೆ.
ಬುಧವಾರ ಹೊರತುಪಡಿಸಿ ವಾರದಲ್ಲಿ ಆರು ದಿನ ರೈಲು ಸಂಚರಿಸಲಿದೆ. ಬೆಳಗ್ಗೆ 5:50ಕ್ಕೆ ಚೆನ್ನೈ ಸೆಂಟ್ರಲ್ನಿಂದ ಹೊರಡುವ ಎಕ್ಸ್ಪ್ರೆಸ್ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಆರ್ಎಸ್) ನಿಲ್ದಾಣದಲ್ಲಿ ಒಂದು ನಿಲುಗಡೆಯೊಂದಿಗೆ ಮಧ್ಯಾಹ್ನ 12:30 ಕ್ಕೆ ಮೈಸೂರು ತಲುಪುತ್ತದೆ.