ಬೆಂಗಳೂರು, ನ 07(DaijiworldNews/MS): ಚೆನ್ನೈ ಎಂಜಿ ರಾಮಚಂದ್ರನ್ ಸೆಂಟ್ರಲ್ ರೈಲ್ವೇ ನಿಲ್ದಾಣದಿಂದ, ಮತ್ತೊಂದು ವಂದೇ ಭಾರತ್ ಎಕ್ಸ್ಪ್ರೆಸ್ ಪ್ರಯಾಣಿಕ ರೈಲು ಪ್ರಯೋಗಿಕ ಸಂಚಾರ ಆರಂಭಿಸಿದೆ.
ಚೆನ್ನೈ-ಬೆಂಗಳೂರು ಹಾಗೂ ಮೈಸೂರು ನಡುವಿನ ವಂದೇ ಭಾರತ್ ಎಕ್ಸ್ಪ್ರೆಸ್ ಪ್ರಯಾಣಿಕ ರೈಲು ಇಂದು ಮುಂಜಾನೆ ಮುಂಜಾನೆ 5.50ರ ವೇಳೆಗೆ ಆರಂಭವಾಗಿದೆ. ಸುಮಾರು ಆರೂವರೆ ಗಂಟೆಗಳಲ್ಲಿ ಅಂದರೆ ಚೆನ್ನೈ-ಮೈಸೂರು ನಗರಗಳ ನಡುವಿನ 504 ಕಿಲೋಮೀಟರ್ ದೂರವನ್ನು ಕ್ರಮಿಸುವ ಮೂಲಕ ಮಧ್ಯಾಹ್ನ 12:30 ಕ್ಕೆ ಮೈಸೂರನ್ನು ತಲುಪುವ ನಿರೀಕ್ಷೆಯಿದೆ. ಹೈಸ್ಪೀಡ್ ರೈಲು ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಆರ್ಎಸ್) ನಿಲ್ದಾಣದಲ್ಲಿ ಒಂದೇ ನಿಲುಗಡೆಯನ್ನು ಹೊಂದಿರುತ್ತದೆ.
ಚೆನ್ನೈ-ಮೈಸೂರು ವಂದೇ ಭಾರತ್ ಎಕ್ಸ್ಪ್ರೆಸ್ಗೆ ಪ್ರಧಾನಿ ಮೋದಿ ಅವರು ನವೆಂಬರ್ 11 ರಂದು ಚಾಲನೆ ನೀಡಲಿದ್ದಾರೆ.
ಇದು ದಕ್ಷಿಣ ಭಾರತದ ಮೊದಲ ಮತ್ತು ದೇಶದ ಐದನೇ ವಂದೇ ಭಾರತ್ ರೈಲು ಆಗಿದೆ.
ಪ್ರಧಾನಿ ಮೋದಿ ಅವರು ನವೆಂಬರ್ 11 ರಂದು ನಗರಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ದಕ್ಷಿಣ ಭಾರತದ ಮೊದಲ 'ವಂದೇ ಭಾರತ್ ಎಕ್ಸ್ಪ್ರೆಸ್' ರೈಲಿಗೆಚಾಲನೆ ನೀಡಲಿದ್ದಾರೆ ಮತ್ತು 5,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್ ಅನ್ನು ಉದ್ಘಾಟಿಸಲಿದ್ದಾರೆ.