ಹೊನ್ನಾಳಿ, ನ 07(DaijiworldNews/MS): ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯ ಸಹೋದರನ ಮಗ ಚಂದ್ರಶೇಖರ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ವಿನಯ ಗುರೂಜಿ ಅವರನ್ನು ಭೇಟಿಯಾದ ಚನ್ನಗಿರಿ ಪೊಲೀಸರು ಇಂಚಿಂಚೂ ಮಾಹಿತಿಯನ್ನು ಕಲೆ ಹಾಕಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಗೌರಿಗದ್ದೆಯ ಆಶ್ರಮಕ್ಕೆ ಆಗಮಿಸಿ ಚಂದ್ರು ಭೇಟಿಯ ಬಗ್ಗೆಪೊಲೀಸರು ಆಶ್ರಮಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.
ಅಕ್ಟೋಬರ್ 31ರಂದು ಶಾಸಕ ರೇಣುಕಾಚಾರ್ಯ ತಮ್ಮನ ಮಗ ಚಂದ್ರಶೇಖರ್ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಗೌರಿಗದ್ದೆಯ ವಿನಯ್ ಗುರೂಜಿ ಭೇಟಿಯಾಗಿ ಬರೋದಾಗಿ ಮನೆಯಲ್ಲಿ ಹೇಳಿ ತೆರಳಿದ್ದರು. ಆದರೆ ಬಳಿಕ ನಾಪತ್ತೆಯಾಗಿದ್ದು, ನಾಲ್ಕು ದಿನದ ಬಳಿಕ ತುಂಗಾ ನದಿ ಕಾಲುವೆಯಲ್ಲಿ ಕಾರಿನ ಸಹಿತ ಬಳಿಕ ಶವವಾಗಿ ಪತ್ತೆಯಾಗಿದ್ದರು.
ಈ ಹಿನ್ನಲೆಯಲ್ಲಿ ಇಂದು ವಿನಯ್ ಗುರೂಜಿ ಆಶ್ರಮಕ್ಕೆ ಪೊಲೀಸರು ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. "ಚಂದ್ರು ಆಶ್ರಮದ ಭಕ್ತ, ಪ್ರತಿಬಾರಿಯಂತೆ ಈ ಬಾರಿಯೂ ಬಂದು ಹೋಗಿದ್ದಾನೆ. ತಡವಾಗಿ ಬಂದಿದ್ದರಿಂದ ಆತನ ಬಳಿ ಹೆಚ್ಚೆನೂ ನಾನು ಮಾತನಾಡಿಲ್ಲ ತಡವಾಗಿ ಬಂದಿದ್ದಕ್ಕೆ ಇದು ಆಶ್ರಮಕ್ಕೆ ಭೇಟಿ ನೀಡುವ ಸಮಯವಾ ಎಂದು ಕೇಳಿದ್ದೇನೆ. ಬೇಗ ಹೋಗಿ, ಜಾಗೃತೆಯಿಂದ ಹೋಗಿ ಎಂದು ಇಬ್ಬರನ್ನ ಕಳುಹಿಸಿಕೊಟ್ಟಿದ್ದೇನೆ, ಆ ಬಳಿಕ ನಡೆದ ಘಟನೆ ಬಗ್ಗೆ ನನಗೆ ನೋವಿದೆ" ಎಂದು ಗುರೂಜಿ ಹೇಳಿದ್ದಾರೆ.
ಬಳಿಕ ಆಶ್ರಮದ ಸಿಬ್ಬಂದಿಗಳ ಜೊತೆಯೂ ಮಾಹಿತಿಯನ್ನೂ ಪೊಲೀಸರು ಕಲೆ ಹಾಕಿದ್ದಾರೆ.