ಅಗರ್ತಲಾ, ನ 06 (DaijiworldNews/DB): ಅಪ್ರಾಪ್ತನೋರ್ವ ಕುಟುಂಬದ ನಾಲ್ವರನ್ನು ಕೊಡಲಿಯಿಂದ ಹೊಡೆದು ಕೊಲೆಗೈದ ಘಟನೆ ತ್ರಿಪುರಾದ ಧಲೈ ಜಿಲ್ಲೆಯ ದೂರದ ಹಳ್ಳಿಯೊಂದರಲ್ಲಿ ಶನಿವಾರ ತಡರಾತ್ರಿ ನಡೆದಿದೆ. ಪೊಲೀಸರು ಬಾಲಕನನ್ನು ಬಂಧಿಸಿದ್ದಾರೆ.
ಅಜ್ಜ, ತಾಯಿ, ಅಕ್ಕ ಮತ್ತು ಚಿಕ್ಕಮ್ಮನನ್ನು ಬಾಲಕ ಕೊಡಲಿಯಿಂದ ಹೊಡೆದು ಸಾಯಿಸಿದ್ದಾನೆ. ಇವರೆಲ್ಲರೂ ಗಾಢ ನಿದ್ದೆಯಲ್ಲಿದ್ದ ವೇಳೆ ಬಾಲಕ ಈ ಕೃತ್ಯ ಎಸಗಿದ್ದಾನೆ. ಬಳಿಕ ಶವಗಳನ್ನು ಬಾವಿಗೆ ಎಸೆದಿದ್ದಾನೆ. ಆತನ ತಂದೆ ಬಂದು ನೋಡಿದಾಗ ಮನೆಯಲ್ಲಿ ರಕ್ತದ ಕಲೆ ಬಿದ್ದಿತ್ತು. ಈ ವೇಳೆ ಘಟನೆ ಬೆಳಕಿಗೆ ಬಂದಿದೆ.
ಘಟನೆಯ ಆರೋಪಿಯಾಗಿರುವ ಬಾಲಕನನ್ನು ಈಗಾಗಲೇ ಬಂಧಿಸಲಾಗಿದೆ. ಅಪರಾಧ ಎಸಗಲು ಕಾರಣ ಏನೆಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತ್ರಿಪುರಾ ಪೊಲೀಸರು ತಿಳಿಸಿದ್ದಾರೆ.
ಆರೋಪಿಯು ಟಿವಿಯಲ್ಲಿ ಅಪರಾಧ ಸಂಬಂಧಿತ ವರದಿಗಳನ್ನು ಹೆಚ್ಚಾಗಿ ವೀಕ್ಷಿಸುತ್ತಿದ್ದ. ಈ ಹಿಂದೆಯೂ ತನ್ನದೇ ಮನೆಯಲ್ಲಿ ಕಳವು ಮಾಡಿ ಸಿಕ್ಕಿ ಬಿದ್ದಿದ್ದ ಎಂದು ಸ್ಥಳೀಯರು ಹೇಳಿರುವುದಾಗಿ ವರದಿಯಾಗಿದೆ.