ಬೆಂಗಳೂರು, ನ 06 (DaijiworldNews/DB): ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿ ಮೇಲೆ ಆ್ಯಸಿಡ್ ಎರಚಿದ್ದ ಆರೋಪಿ ನಾಗೇಶ್ ಗ್ಯಾಂಗ್ರೀನ್ ಲಕ್ಷಣಗಳಿಂದ ಬಳಲುತ್ತಿದ್ದಾನೆ. ಇನ್ನು ಇದಕ್ಕೆ ಹಲವಾರು ಮಂದಿ ವಿಧಿ ನೀಡಿದ ಶಿಕ್ಷೆ ಎಂದು ಪ್ರತಿಕ್ರಿಯಿಸಿದ್ದಾರೆ.
ಕಳೆದ ಆರು ತಿಂಗಳಿನಿಂದ ಬಲಗಾಲಿನ ಸಮಸ್ಯೆಯಿಂದ ಬಳಲುತ್ತಿದ್ದು, ಕಾಲಿನಲ್ಲಿ ಗಾಂಗ್ರೀನ್ ಲಕ್ಷಣಗಳು ಪತ್ತೆಯಾಗಿವೆ. ಬೆಂಗಳೂರಿನ ಹೆಗ್ಗನಹಳ್ಳಿಯ ಯುವತಿಯ ಹಿಂದೆ ಬಿದ್ದು ಪ್ರೀತಿಸುವಂತೆ ಒತ್ತಡ ಹೇರಿ ಆಕೆ ಒಪ್ಪದಿದ್ದಾಗ ಆಕೆಯ ಮೇಲೆ ಏಪ್ರಿಲ್ 28ರಂದು ಆ್ಯಸಿಡ್ ಎರಚಿ ವಿಕೃತಿ ಮೆರೆದಿದ್ದ. ಸದ್ಯ ಆತ ಕಾಮಾಕ್ಷಿಪಾಳ್ಯ ಪೊಲೀಸರ ವಶದಲ್ಲಿದ್ದಾನೆ. ಈ ನಡುವೆ ಕಳೆದ ಆರು ತಿಂಗಳುಗಳಿಂದ ಆತನ ಬಲಗಾಲಿನಲ್ಲಿ ಸಮಸ್ಯೆ ಕಾಣುತ್ತಿದ್ದು, ವಿಕ್ಟೋರಿಯಾ ಆಸ್ಪತ್ರೆಯ ಜೈಲ್ ವಾರ್ಡ್ನಲ್ಲಿ ಇದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ಸನ್ಯಾಸಿ ವೇಷ ಧರಿಸಿಕೊಂಡು ತಲೆಮರೆಸಿಕೊಂಡಿದ್ದ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದ ಈತ ಅಲ್ಲಿಂದ ಬೆಂಗಳೂರಿಗೆ ಕರೆ ತರುವ ವೇಳೆ ಮಾರ್ಗಮಧ್ಯೆ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಈ ವೇಳೆ ಆತನ ಕಾಲಿಗೆ ಪೊಲೀಸರು ಗುಂಡೇಟು ಹೊಡೆದಿದ್ದರು. ಈ ಸ್ಥಳದಲ್ಲಿ ರಾಡ್ ಹಾಕಿ ಬ್ಯಾಂಡೇಜ್ ಹಾಕಲಾಗಿದ್ದರೂ ನೋವು ಕಡಿಮೆಯಾಗಿಲ್ಲ ಎಂದು ತಿಳಿದು ಬಂದಿದೆ.
ಇನ್ನು ಈತನಿಂದ ಆ್ಯಸಿಡ್ ದಾಳಿಗೊಳಗಾದ ಯುವತಿಯೂ ಹಲವಾರು ದಿನಗಳ ಕಾಲ ಆಸ್ಪತ್ರೆಯಲ್ಲಿದ್ದರು. ಇದೀಗ ಆತನ ನರಳಾಟ ಕಂಡು ಇನ್ನೊಬ್ಬರ ಬದುಕು ಹಾಳು ಮಾಡಿದಕ್ಕೆ ವಿಧಿಯೇ ಆತನಿಗೆ ನೀಡಿದ ಶಿಕ್ಷೆ ಇದು ಎಂದು ಜನರು ಪ್ರತಿಕ್ರಿಯಿಸುತ್ತಿದ್ದಾರೆ.