ನೋಯ್ಡಾ, ನ 06 (DaijiworldNews/DB): ಉಪ ರಾಷ್ಟ್ರಪತಿ ಪಾಲ್ಗೊಂಡ ಕಾರ್ಯಕ್ರಮದಲ್ಲಿ ಬಹುದೊಡ್ಡ ಭದ್ರತಾ ಲೋಪವೊಂದು ಬಯಲಾಗಿದೆ. ಉಪ ರಾಷ್ಟ್ರಪತಿಯವರ ಭದ್ರತೆಗೆಂದು ನಿಯೋಜಿಸಲಾಗಿದ್ದ15 ಮಂದಿ ಪೊಲೀಸರು ಗೈರು ಹಾಜರಾಗಿದ್ದಾರೆ.
ಗ್ರೇಟರ್ ನೋಯ್ಡಾದ ಇಂಡಿಯಾ ಎಕ್ಸ್ಪೋ ಮಾರ್ಟ್ನಲ್ಲಿ ನಡೆದ ವಾಟರ್ ವೀಕ್ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳಲೆಂದು ಶನಿವಾರ ದೇಶದ ಉಪರಾಷ್ಟ್ರಪತಿ ಜಗದೀಪ್ ಧನಕರ್ ಆಗಮಿಸಿದ್ದರು. ಉಪರಾಷ್ಟ್ರಪತಿ ಆಗಮನದ ಹಿನ್ನೆಲೆಯಲ್ಲಿ ಭದ್ರತೆಗೆಂದು ಹಲವಾರು ಪೊಲೀಸರನ್ನು ನಿಯೋಜಿಸಲಾಗಿತ್ತು. ಆದರೆ ಭದ್ರತೆಗೆ ನಿಯೋಜಿಸಲಾದ ಪೊಲೀಸರ ಪೈಕಿ 15 ಮಂದಿ ಪೊಲೀಸರು ಗೈರು ಹಾಜರಾಗಿದ್ದರು.
ಇಬ್ಬರು ಪೊಲೀಸ್ ಠಾಣೆಗಳ ಪ್ರಭಾರಿಗಳು, ಐಟಿ ಸೆಲ್ನ ಒಬ್ಬ ಇನ್ಸ್ಪೆಕ್ಟರ್, ಒಬ್ಬ ಸಬ್ ಇನ್ಸ್ಪೆಕ್ಟರ್, ಮಹಿಳಾ ಸಬ್ ಇನ್ಸ್ಪೆಕ್ಟರ್, ಆರು ಹೆಡ್ ಕಾನ್ಸ್ಟೆಬಲ್ಗಳು, ನಾಲ್ವರು ಮಹಿಳಾ ಕಾನ್ಸ್ಟೆಬಲ್ಗಳು ಗೈರು ಹಾಜರಾಗಿರುವುದು ಕಂಡು ಬಂದಿದೆ. ಗ್ರೇಟರ್ ನೋಯ್ಡಾದ ಡಿಸಿಪಿ ಅಭಿಷೇಕ್ ವರ್ಮಾ ಅವರು ತನಿಖೆ ನಡೆಸಿದಾಗ ಪೊಲೀಸರ ಗೈರು ಹಾಜರಿ ಬೆಳಕಿಗೆ ಬಂದಿದೆ. ಈ ಪೈಕಿ ಕೆಲವು ಪೊಲೀಸರು ನಿಗದಿಪಡಿಸಿದ ಸಮಯಕ್ಕಿಂತ ತಡವಾಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಹಿನ್ನೆಲೆಯಲ್ಲಿ ಅವರನ್ನೂ ಗೈರು ಹಾಜರಾದ ಪೊಲೀಸರ ಪಟ್ಟಿಯಲ್ಲಿ ಸೇರಿಸಲಾಯಿತು.