ತಿರುವನಂತಪುರಂ, ನ 06 (DaijiworldNews/DB): ಮನೆಯ ಸಾಕು ನಾಯಿಗೆ ತಡವಾಗಿ ಊಟ ಹಾಕಿದ್ದಕ್ಕೆ ಆಕ್ರೋಶಗೊಂಡ ಯುವಕನೋರ್ವ ಸಂಬಂಧಿಯನ್ನು ಹಿಂಸಿಸಿ ಕೊಂದ ಘಟನೆ ಪಾಲಕ್ಕಾಡ್ನ ಮನ್ನೆಂಗೋಡ್ನಲ್ಲಿ ನಡೆದಿದೆ.
ಹರ್ಷದ್ (27) ಕೊಲೆಯಾದ ಯುವಕ. ಹಕೀಂ (27) ಕೃತ್ಯ ಎಸಗಿದ ಆರೋಪಿ.ಹರ್ಷದ್ ಮತ್ತು ಹಕೀಂ ಬಾಡಿಗೆ ಮನೆಯಲ್ಲಿ ವಾಸವಿದ್ದು, ಖಾಸಗಿ ಮೊಬೈಲ್ ಟೆಲಿಕಾಂ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದರು. ಇಬ್ಬರೂ ಕೂಡಾ ಸಂಬಂಧಿಗಳಾಗಿದ್ದು, ಹಕೀಂ ಹರ್ಷದ್ನನ್ನು ತನ್ನ ಸೇವಕನಂತೆ ಎಲ್ಲಾ ಕೆಲಸಗಳನ್ನು ಆತನ ಕೈಯಿಂದಲೇ ಮಾಡಿಸುತ್ತಿದ್ದ. ಆದರೆ ಸಂಬಂಧಿಯಾದ ಕಾರಣ ಹರ್ಷದ್ ಇದಕ್ಕೆ ಆಕ್ಷೇಪವೆತ್ತದೆ ಸುಮ್ಮನಿದ್ದ.
ನವೆಂಬರ್ 3ರ ಗುರುವಾರ ಹಕೀಂನ ಸಾಕುನಾಯಿಗೆ ಹರ್ಷದ್ ತಡವಾಗಿ ಊಟ ಹಾಕಿದ್ದ. ಇದರಿಂದ ಸಿಟ್ಟಾದ ಹಕೀಂ ನಾಯಿ ಬೆಲ್ಟ್ ಹಾಗೂ ಮರದ ವಸ್ತುವಿನಿಂದ ಹರ್ಷದ್ಗೆ ಹೊಡೆಯಲಾರಂಭಿಸಿದ್ದಾನೆ. ಈ ವೇಳೆ ನೋವಿನಿಂದ ಹರ್ಷದ್ ಚೀರಾಡಿದರೂ ಬಿಡದೇ ಹೊಡೆದು ಮನೆಯಿಂದ ಒದ್ದು ಕೆಳಗೆ ದೂಡಿದ್ದಾನೆ. ತೀವ್ರ ಗಾಯಗೊಂಡ ಹರ್ಷದ್ನನ್ನು ಬಳಿಕ ಹಕೀಂ ಆಸ್ಪತ್ರೆಗೆ ಕರೆದೊಯ್ದು, ಮನೆಯ ಮೇಲಿಂದ ಬಿದ್ದು ಗಾಯಗೊಂಡಿದ್ದಾನೆಂದು ಸುಳ್ಳು ಹೇಳಿದ್ದಾನೆ. ಆದರೆ ಹರ್ಷದ್ ಬೆನ್ನಿನಲ್ಲಿ ಗಾಯ ನೋಡಿದ ವೈದ್ಯರು ಅನುಮಾನಗೊಂಡು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಬಳಿಕ ಶನಿವಾರ ಹಕೀಂನನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ವಿಚಾರಣೆ ನಡೆಸಿದಾಗ ಸತ್ಯ ಬಾಯ್ಬಿಟ್ಟಿದ್ದಾನೆ.
ಹರ್ಷದ್ಗೆ 160 ಕ್ಕೂ ಕಡೆಗಳಲ್ಲಿ ಗಂಭೀರ ಗಾಯವಾಗಿದ್ದ ಕಾರಣ ಆಸ್ಪತ್ರೆಗೆ ಬರುವಾಗ ದಾರಿ ಮಧ್ಯೆಯೇ ಆತ ಸಾವನ್ನಪ್ಪಿದ್ದ ಎಂದು ವರದಿಯಾಗಿದೆ. ಪೊಲೀಸ್ ವಿಚಾರಣೆ ವೇಳೆ ಪ್ರತಿ ವಿಷಯಕ್ಕೂ ಹರ್ಷದ್ನನ್ನು ಹಕೀಂ ಹೊಡೆದು ಹಿಂಸೆ ನೀಡುತ್ತಿದ್ದ ಎಂಬುದೂ ಬಯಲಾಗಿದೆ.