ತೆಲಂಗಾಣ, ನ 06 (DaijiworldNews/HR): ಕಲುಷಿತ ಉಪಹಾರ ಸೇವಿಸಿ ಕೆಜಿಬಿವಿಯ 60 ವಿದ್ಯಾರ್ಥಿನಿಯರು ಆಸ್ಪತ್ರೆಗೆ ದಾಖಲಾಗಿದ್ದು, ಈ ಪೈಕಿ 25 ವಿದ್ಯಾರ್ಥಿನಿಯರು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗಿದೆ.
ಸಂಗಾರೆಡ್ಡಿ ಜಿಲ್ಲೆಯ ನಾರಾಯಣಖೇಡ್ ಪಟ್ಟಣದ ಉಪನಗರದಲ್ಲಿರುವ ಈ ಶಾಲೆಯಲ್ಲಿ ಸುಮಾರು 300 ವಿದ್ಯಾರ್ಥಿಗಳು ವಿಧ್ಯಾಭ್ಯಾಸ ಮಾಡುತ್ತಿದ್ದು, ವಿದ್ಯಾರ್ಥಿಗಳು ಉಪಾಹಾರಕ್ಕಾಗಿ ಶಾವಿಗೆ ಉಪ್ಪಿಟ್ಟು ಮತ್ತು ಸ್ವಲ್ಪ ಹಾಲನ್ನು ಸೇವಿಸಿದ್ದಾರೆ.
ಇನ್ನು ಮಕ್ಕಳಿಗೆ ಬಡಿಸಿದ ಉಪ್ಪಿಟ್ಟಿನಲ್ಲಿ ಹುಳುಗಳು ಕಾಣಿಸಿಕೊಂಡಿದ್ದು, ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿರುವುದನ್ನು ಗಮನಿಸಿದ ಹಾಸ್ಟೆಲ್ ಆಡಳಿತ ಮಂಡಳಿ 20 ಬಾಲಕಿಯರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದೆ. ಇದೇ ವೇಳೆ ನಾರಾಯಣಖೇಡ್ ಆರ್ಡಿಒ ಅಂಬಾದಾಸ್ ರಾಜೇಶ್ವರ್, ತಹಶೀಲ್ದಾರ್ ಮುರಳಿ ಮತ್ತು ಪೊಲೀಸ್ ಇನ್ಸ್ಪೆಕ್ಟರ್ ಕೃಷ್ಣಾ ರೆಡ್ಡಿ ಅವರು ಆಸ್ಪತ್ರೆಗೆ ಧಾವಿಸಿದ್ದಾರೆ ಮತ್ತು ನಂತರ ಹಾಸ್ಟೆಲ್ಗೆ ಧಾವಿಸಿದಾಗ ಇನ್ನುಳಿದ ಇತರ ವಿದ್ಯಾರ್ಥಿಗಳಿಗೂ ವಾಂತಿಭೇದಿ ಕಾಣಿಸಿಕೊಂಡಿದೆ.
ಬೆಳಗಿನ ಉಪಾಹಾರದಲ್ಲಿ ಹುಳುಗಳು ಇವೆ ಎಂದು ವಿದ್ಯಾರ್ಥಿನಿಯರು ಹೇಳಿದರೂ, ಪ್ರಾಂಶುಪಾಲರು ಹಾಗೂ ಸಿಬ್ಬಂದಿ ಅದನ್ನು ನಿರ್ಲಕ್ಷಿಸಿದ್ದಾರೆ ಎಂದು ವಿದ್ಯಾರ್ಥಿಗಳು ದೂರಿದ್ದು, ಈ ಸಂಬಂಧ ಜಿಲ್ಲಾಧಿಕಾರಿ ಎ. ಶರತ್ ಅವರು ಹಾಸ್ಟೆಲ್ ನ ವಿಶೇಷ ಅಧಿಕಾರಿ ಮತ್ತು ಐವರು ಸಿಬ್ಬಂದಿಯನ್ನು ಅಮಾನತುಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.