ಮುಂಬಯಿ, ನ 06 (DaijiworldNews/DB): ನ್ಯಾಯಮೂರ್ತಿಗಳ ನೇಮಕಾತಿಗೆ ಸುಪ್ರೀಂಕೋರ್ಟ್ನಲ್ಲಿ ಜಾರಿಯಲ್ಲಿರುವ ಕೊಲಿಜಿಯಂ ವ್ಯವಸ್ಥೆ ಪಾರದರ್ಶಕವಾಗಿಲ್ಲ ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.
ಮುಂಬಯಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ನ್ಯಾಯಾಲಯಗಳೇ ನ್ಯಾಯಾಂಗ ವ್ಯವಸ್ಥೆ ಸುಧಾರಣೆಗೆ ಅಡ್ಡಿಯಾಗಿವೆ. ಕೊಲಿಜಿಯಂ ವ್ಯವಸ್ಥೆಯಲ್ಲಿ ಪಾರದರ್ಶಕತೆ ಕಾಣುವುದಿಲ್ಲ. ಇದರಲ್ಲಿ ರಾಜಕೀಯ ಪ್ರಭಾವ ನಡೆಯುತ್ತಿದೆ. ಪರ್ಯಾಯ ವ್ಯವಸ್ಥೆಯನ್ನು ಸರ್ಕಾರ ಜಾರಿಗೊಳಿಸುವವರೆಗೂ ಇದೇ ವ್ಯವಸ್ಥೆಯೊಂದಿಗೆ ಕೆಲಸ ಅನಿವಾರ್ಯ ಎಂದರು.
ಅರ್ಹತೆ ಮತ್ತು ಕ್ಷಮತೆಯ ಆಧಾರದಲ್ಲಿ ನ್ಯಾಯಮೂರ್ತಿಗಳ ನೇಮಕವಾಗಬೇಕು. ಆದರೆ ಕೊಲಿಜಿಯಂ ವ್ಯವಸ್ಥೆಯಡಿ ಅದರಲ್ಲಿರುವ ಸದಸ್ಯರ ಪರಿಚಯಸ್ಥರಿಗೇ ಮಣೆ ಹಾಕಲಾಗುತ್ತಿದೆ. ಇದು ಪಾರದರ್ಶಕ ಕ್ರಮವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನ್ಯಾಯಾಂಗ ವ್ಯವಸ್ಥೆ ಸ್ವತಂತ್ರವಾಗಿರಬೇಕೆಂಬುದೇ ಸರ್ಕಾರದ ಆಶಯ. ಶಾಸಕಾಂಗ, ಕಾರ್ಯಾಂಗದ ಮೇಲೆ ನ್ಯಾಯಾಂಗದ ಹಸ್ತಕ್ಷೇಪ ಇರಬಾರದು. ಯಾವುದೇ ನ್ಯಾಯಾಧೀಶರು ವಿಚಾರಣೆ ವೇಳೆ ಲಿಖಿತ ಅಭಿಪ್ರಾಯಗಳನ್ನು ಸಲ್ಲಿಸಬೇಕೇ ಹೊರತು ಅನಗತ್ಯವಾಗಿ ಮೌಖಿಕ ಅಭಿಪ್ರಾಯ ಸಲ್ಲದು ಎಂದರು.
ಇಡೀ ವಿಶ್ವದಲ್ಲಿ ಸರ್ಕಾರವೇ ನ್ಯಾಯಾಧೀಶರ ನೇಮಕ ಮಾಡುತ್ತದೆ. ಆದರೆ ಕೊಲಿಜಿಯಂ ವ್ಯವಸ್ಥೆಯೊಳಗೆ ನ್ಯಾಯಾಧೀಶರ ನೇಮಕವಾಗುವುದು ನಮ್ಮ ದೇಶದಲ್ಲಿ ಮಾತ್ರ ಎಂದು ಅವರು ಅಸಮಾಧಾನ ಹೊರ ಹಾಕಿದರು.