ಭೋಪಾಲ್, ನ 06 (DaijiworldNews/DB): ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಉಮಾಭಾರತಿ ಸನ್ಯಾಸ ಸ್ವೀಕಾರಕ್ಕೆ ಮುಂದಾಗಿದ್ದು, ಇನ್ಮುಂದೆ ದೀದಿ ಮಾ ಎಂಬ ಹೆಸರಿನಿಂದ ಕರೆಯಲ್ಪಡಲಿದ್ದಾರೆ.
ಜೈನ ಧರ್ಮದ ಅನುಸಾರ ಸನ್ಯಾಸ ಸ್ವೀಕಾರಕ್ಕೆ ಮುಂದಾಗಿರುವ ಉಮಾಭಾರತಿ ಅವರು ಈ ವಿಚಾರವನ್ನು ಸ್ವತಃ ಟ್ವೀಟ್ ಮಾಡಿ ತಿಳಿಸಿದ್ದಾರೆ. ನ.17ರಂದು ಅಧಿಕೃತವಾಗಿ ಅಚರು ಸನ್ಯಾಸತ್ವ ಸ್ವೀಕಾರ ಮಾಡಲಿದ್ದು, ಕರ್ನಾಟಕ ಮೂಲದ ಗುರು ಜೈನ ಸಂತ ಆಚಾರ್ಯ ವಿದ್ಯಾಸಾಗರ್ ಮಹಾರಾಜ್ ಅವರ ಆದೇಶದಂತೆ ಸನ್ಯಾಸ ಧರ್ಮವನ್ನು ಸ್ವೀಕರಿಸುತ್ತಿದ್ದೇನೆ ಎಂದಿದ್ದಾರೆ.
ಕುಟುಂಬ ಸೇರಿದಂತೆ ಸರ್ವ ಐಹಿಕ ಬಂಧನಗಳಿಂದ ಮುಕ್ತಳಾಗಲಿದ್ದೇನೆ. ವಿಶ್ವ ಸಮುದಾಯವೇ ಇನ್ಮುಂದೆ ನನ್ನ ಕುಟುಂಬ. ಮುಂದೆ ದೀದಿ ಮಾ ಎಂಬ ಹೆಸರಿನಲ್ಲಿ ನನ್ನನ್ನು ಸಂಬೋಧಿಸಿ ಎಂಬುದಾಗಿ ಜನರಲ್ಲಿ ಮನವಿ ಮಾಡಿದ್ದಾರೆ. ಸನ್ಯಾಸತ್ವ ಸ್ವೀಕರಿಸುವ ಬಗ್ಗೆ 27 ಸರಣಿ ಟ್ವೀಟ್ಗಳನ್ನು ಅವರು ಮಾಡಿದ್ದಾರೆ.
ಇನ್ನು ಉಮಾ ಭಾರತಿ ಅವರು ಮಧ್ಯಪ್ರದೇಶದ ಅಮರ್ಕಂಟಕ್ನಲ್ಲಿ 1997ರ ನವೆಂಬರ್ 17ರಂದು ಹಿಂದೂ ಧರ್ಮದ ಪ್ರಕಾರ ಸನ್ಯಾಸ ದೀಕ್ಷೆ ಸ್ವೀಕರಿಸಿದ್ದರು. ಅದಕ್ಕೂ ಮುನ್ನ ಉಮಾಶ್ರೀ ಭಾರತಿ ಆಗಿದ್ದ ಅವರು ದೀಕ್ಷೆ ಸ್ವೀಕಾರದ ಬಳಿಕ ಉಮಾಭಾರತಿ ಎಂಬುದಾಗಿ ಕರೆಯಲ್ಪಡುತ್ತಿದ್ದರು.
ರಾಮಮಂದಿರ ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಉಮಾಭಾರತಿ ಬಿಜೆಪಿಯ ಹಿರಿಯ ನಾಯಕಿಯಾಗಿ ಬಿಜೆಪಿಯ ಬೆಂಕಿ ಚೆಂಡು ಎಂದೇ ಕರೆಯಲ್ಪಡುತ್ತಿದ್ದರು.