ನವದೆಹಲಿ, ನ 05 (DaijiworldNews/DB): ರಾಷ್ಟ್ರಗೀತೆ 'ಜನ ಗಣ ಮನ' ಮತ್ತು 'ವಂದೇ ಮಾತರಂ' ಎರಡಕ್ಕೂ ದೇಶದ ನಾಗರಿಕರು ಸಮಾನ ಗೌರವ ನೀಡಬೇಕು. ಇವೆರಡೂ ಒಂದೇ ಸಾಲಿನಲ್ಲಿ ನಿಲ್ಲುತ್ತದೆ ಎಂದು ದೆಹಲಿ ಹೈಕೋರ್ಟ್ಗೆ ಕೇಂದ್ರ ಸರ್ಕಾರ ತಿಳಿಸಿದೆ.
'ವಂದೇ ಮಾತರಂ' ಗೀತೆಗೆ ರಾಷ್ಟ್ರಗೀತೆಯಷ್ಟೇ ಗೌರವ ಮತ್ತು ಸಮಾನ ಸ್ಥಾನಮಾನ ನೀಡಬೇಕೆಂದು ಒತ್ತಾಯಿಸಿ ನ್ಯಾಯವಾದಿ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಪ್ರತಿಕ್ರಿಯೆಯಾಗಿ ಗೃಹ ಸಚಿವಾಲಯವು ಸಲ್ಲಿಸಿದ ಅಫಿಡವಿಟ್ನಲ್ಲಿ ಈ ವಿಚಾರವನ್ನು ಹೇಳಿದೆ.
ಈ ಎರಡು ಹಾಡುಗಳೂ ಭಾರತೀಯರಲ್ಲಿ ವಿಶಿಷ್ಟ ಸ್ಥಾನ ಪಡೆದುಕೊಂಡಿದೆ. ಹಾಡಿನ ನುಡಿಸುವಿಕೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ನ ಎಲ್ಲಾ ನಿರ್ದೇಶನಗಳನ್ನು ಪಾಲನೆ ಮಾಡಲಾಗುತ್ತಿದೆ. ಎರಡೂ ಗೀತೆಗಳನ್ನು ಭಿನ್ನವಾಗಿ ಹಾಡುವ ನಿಬಂಧನೆಯಾಗಲೀ, ಸೂಚನೆಯಾಗಲಿ ಇಲ್ಲ. ಎರಡೂ ಗೀತೆಗಳಿಗೂ ಅದರದೇ ಆದ ಪಾವಿತ್ರ್ಯವಿದೆ ಎಂದು ಕೇಂದ್ರ ಸ್ಪಷ್ಟಪಡಿಸಿದೆ.
ಕೇಂದ್ರ ಸರ್ಕಾರವು ಪ್ರತಿವಾದದ ಅಫಿಡವಿಟ್ನ್ನು ನ್ಯಾಯವಾದಿ ಮನೀಶ್ ಮೋಹನ್ ಅವರ ಮೂಲಕ ಸಲ್ಲಿಸಿದೆ.