ನವದೆಹಲಿ, ನ 05 (DaijiworldNews/DB): ದೇಶದಲ್ಲಿ ಕೋಟ್ಯಾಂತರ ಸಂಖ್ಯೆಯಲ್ಲಿ ಯುವಕರು ಉದ್ಯೋಗಕ್ಕಾಗಿ ಕಾಯುತ್ತಿದ್ದಾರೆ. ಆದರೆ ಪ್ರಧಾನಿ ಕೇವಲ ಕೆಲವೇ ಸಾವಿರ ನೇಮಕಾತಿ ಪತ್ರ ಹಸ್ತಾಂತರಿಸಿ ಸುಮ್ಮನಾಗಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಶನಿವಾರ ಸರಣಿ ಟ್ವೀಟ್ ಮಾಡಿರುವ ಅವರು, ಅಧಿಕಾರಕ್ಕೇರುವ ಸಂದರ್ಭದಲ್ಲಿ ಪ್ರತಿ ವರ್ಷ ಎರಡು ಕೋಟಿ ಹೊಸ ಉದ್ಯೋಗ ಸೃಷ್ಟಿಯ ಭರವಸೆ ನೀಡಿದ್ದ ಮೋದಿ, ಕೇವಲ ಕೇಂದ್ರ ಸರ್ಕಾರಿ ಹುದ್ದೆಗಳಿಗೆ 10 ಲಕ್ಷ ನೇಮಕಾತಿ ನಡೆಸಲು ಎಂಟು ವರ್ಷಗಳನ್ನು ತೆಗೆದುಕೊಂಡಿದೆ ಎಂದು ಆಪಾದಿಸಿದರು.
ಗ್ರಾಮೀಣ ಭಾರತದಲ್ಲಿ ನಿರುದ್ಯೋಗವೇ ದೊಡ್ಡ ಸವಾಲಾಗಿದೆ. ವರ್ಷಗಟ್ಟಲೆ ಕಾದರೂ ಸರ್ಕಾರಿ ಉದ್ಯೋಗ ಸಿಗದ ಪರಿಸ್ಥಿತಿ ದೇಶದ ಯುವಕರಲ್ಲಿದೆ. ಇಚ್ಚಾಶಕ್ತಿಯ ಕೊರತೆ ಮತ್ತು ಬಿಜೆಪಿಯ ಸುಳ್ಳು ಭರವಸೆಗಳೇ ಇದಕ್ಕೆಲ್ಲಾ ಕಾರಣವಾಗಿದೆ ಎಂದರು.
ಅಗ್ನಿಪಥ್ ಯೋಜನೆಯಡಿ 40,000 ಹುದ್ದೆಗಳಿಗೆ 35 ಲಕ್ಷ ಅರ್ಜಿ, ಉತ್ತರ ಪ್ರದೇಶದಲ್ಲಿ ಕೆಲವು ಸಾವಿರ ಹುದ್ದೆಗಳಿಗೆ 37 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ. ಸ್ನಾತಕೋತ್ತರ ಪದವಿ ಓದಿದವರು, ಪಿಎಚ್ಡಿ ಪದವೀಧರರು ಕೂಡಾ ತಮ್ಮ ಅರ್ಹತೆಗಿಂತ ಕಡಿಮೆ ಅರ್ಹತೆ ಹೊಂದಿರುವ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ನಿರುದ್ಯೋಗ ಸಮಸ್ಯೆ ದೇಶದಲ್ಲಿ ಹೆಚ್ಚಿದೆ ಎಂಬುದಕ್ಕೆ ಇದೇ ಸಾಕ್ಷಿ ಎಂದವರು ಆತಂಕ ವ್ಯಕ್ತಪಡಿಸಿದರು.
ಸಶಸ್ತ್ರ ಪಡೆಗಳು, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು (ಸಿಎಪಿಎಫ್ಗಳು), ಕೇಂದ್ರ ಸರಕಾರಿ ಶಾಲೆಗಳು, ಉನ್ನತ ಶಿಕ್ಷಣ ಸಂಸ್ಥೆಗಳು, ಆರೋಗ್ಯ ಸಂಸ್ಥೆಗಳು, ಪಿಎಸ್ಯುಗಳು, ಪಿಎಸ್ಯು ಬ್ಯಾಂಕ್ಗಳು, ಪೊಲೀಸ್ ಮತ್ತು ನ್ಯಾಯಾಲಯಗಳು ಸೇರಿದಂತೆ ಸಾರ್ವಜನಿಕ ವಲಯದ ಸೇವಾ ಸಂಸ್ಥೆಗಳಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿ ಇದ್ದರೂ ಅದರ ಭರ್ತಿಗೆ ಸರ್ಕಾರ ಮುಂದಾಗುತ್ತಿಲ್ಲ ಎಂದು ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.