ಪಾಟ್ನಾ, ನ 05 (DaijiworldNews/DB): ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಎಲ್ಲಾ ವಿಪಕ್ಷಗಳು ಒಗ್ಗಟ್ಟಾಗಿ ಹೋರಾಡಿದರೆ ಬಿಜೆಪಿ 50 ಸ್ಥಾನಗಳಿಗೆ ಕುಸಿಯುವುದು ನಿಶ್ಚಿತ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.
ಪಾಟ್ನಾದಲ್ಲಿ ನಡೆದ ಜೆಡಿಯು ಕಾರ್ಯಕಾರಿ ಸಭೆಯ ಬಳಿಕ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ವಿರುದ್ದದ ಹೋರಾಟ ತೀರಾ ಅಗತ್ಯವಾಗಿದೆ. ಇದಕ್ಕಾಗಿ ವಿಪಕ್ಷಗಳೆಲ್ಲವೂ ಒಟ್ಟಾಗಬೇಕಿದೆ. ಈ ನಿಟ್ಟಿನಲ್ಲಿ ವಿವಿಧ ಪಕ್ಷಗಳ ಉನ್ನತ ಮಟ್ಟದ ನಾಯಕರನ್ನು ಭೇಟಿಯಾಗಲು ಮುಂದಿನ ಕೆಲ ದಿನಗಳಲ್ಲಿ ದೆಹಲಿಗೆ ತೆರಳುವುದಾಗಿ ತಿಳಿಸಿದರು.
ದೇಶದಲ್ಲಿ ಕೋಮು ಸೌಹಾರ್ದ ಕೆಡಿಸುವಲ್ಲಿ ಬಿಜೆಪಿ ನಿರತವಾಗಿದೆ. ಪಂಚಾಯತ್ ಮಟ್ಟದಲ್ಲೇ ಜಾಗೃತಿಗೊಳ್ಳಬೇಕಾದ ಅವಶ್ಯಕತೆ ನಮಗಿದೆ. ಆ ಮೂಲಕ ಅವರಿಗೆ ಪಾಠ ಕಲಿಸಬೇಕು ಎಂದರು.
ಜೆಡಿಯುವಿನ ಐವರು ಶಾಸಕರು ಬಿಜೆಪಿ ಸೇರ್ಪಡೆಗೊಂಡಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇತರ ಪಕ್ಷಗಳಿಂದ ಗೆದ್ದ ಶಾಸಕರನ್ನು ಒಡೆಯುವ ತಂತ್ರವನ್ನು ಬಿಜೆಪಿ ನಿರಂತರವಾಗಿ ಮಾಡುತ್ತಿದೆ ಎಂದು ಕಿಡಿ ಕಾರಿದರು.