ಗುಜರಾತ್, ನ 05 (DaijiworldNews/DB): 130ಕ್ಕೂ ಅಧಿಕ ಮಂದಿಯನ್ನು ಬಲಿ ತೆಗೆದುಕೊಂಡ ಮೊರ್ಬಿ ಸೇತುವೆ ನವೀಕರಣ ಜವಾಬ್ದಾರಿ ನಿರ್ವಹಿಸಿದ್ದ ಕಂಪೆನಿ ದುರಸ್ತಿಗೆ ನಿಗದಿಪಡಿಸಿದ 2 ಕೋಟಿ ರೂ.ಗಳಲ್ಲಿ 12 ಲಕ್ಷ ರೂ.ಗಳನ್ನು ಮಾತ್ರ ದುರಸ್ತಿಗೆ ಖರ್ಚು ಮಾಡಿದೆ ಎಂಬ ಮಾಹಿತಿ ಬಹಿರಂಗಗೊಂಡಿದೆ.
ಅಜಂತಾದ ಅಂಗಸಂಸ್ಥೆಯಾಗಿರುವ ಅಹಮದಾಬಾದ್ ಮೂಲದ ಒರೆವಾ ಸಮೂಹವು ಈ ತೂಗುಸೇತುವೆ ದುರಸ್ತಿ ಜವಾಬ್ದಾರಿಯನ್ನು ವಹಿಸಿಕೊಂಡಿತ್ತು. ಸೇತುವೆ ದುರಸ್ತಿಗೆ ಸರ್ಕಾರದಿಂದ 2 ಕೋಟಿ ರೂ. ಮಂಜೂರಾಗಿತ್ತು. ಆದರೆ ಕಂಪೆನಿಯು ಶೇ. 6 ಅಂದರೆ ಕೇವಲ 12 ಲಕ್ಷ ರೂ.ಗಳಲ್ಲಿ ದುರಸ್ತಿ ಕಾರ್ಯ ಮುಗಿಸಿದೆ. ಉಳಿದ ಹಣದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಇನ್ನು ಒರೆವಾ ಗ್ರೂಪ್ಗೆ ವಹಿಸಲಾಗಿದ್ದ ನಿರ್ವಹಣೆ ಜವಾಬ್ದಾರಿಯನ್ನು ಆ ಸಂಸ್ಥೆಯು ಮತ್ತೊಂದು ಸಂಸ್ಥೆಗೆ ಗುತ್ತಿಗೆ ವಹಿಸಿತ್ತು. ಧ್ರಂಗಾಧ್ರ ಮೂಲದ ದೇವಪ್ರಕಾಶ್ ಸೊಲ್ಯೂಷನ್ಗೆ ಗುತ್ತಿಗೆ ನೀಡಿತ್ತು. ಈ ಗುತ್ತಿಗೆ ಸಂಸ್ಥೆಯವರಿಗೆ ದುರಸ್ತಿ ತಾಂತ್ರಿಕತೆಯ ಜ್ಞಾನವೇ ಇರಲಿಲ್ಲ ಎಂದು ತಿಳಿದು ಬಂದಿದೆ. ದೇವಪ್ರಕಾಶ್ ಸೊಲ್ಯೂಷನ್ನಿಂದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇದರಲ್ಲಿ ದುರಸ್ತಿಗೆ ಮಾಡಿದ ಖರ್ಚಿನ ಮೊತ್ತವನ್ನು ಉಲ್ಲೇಖಿಸಲಾಗಿದೆ.
ವಸಾಹತುಶಾಹಿ ಕಾಲದ ತೂಗು ಕೇಬಲ್ ಸೇತುವೆಯ ನವೀಕರಣ ಹಾಗೂ ದುರಸ್ತಿ ಹಿನ್ನೆಲೆಯಲ್ಲಿ ಕಳೆದ ಮಾರ್ಚ್ನಲ್ಲಿ ಈ ಸಂಸ್ಥೆಗೆ ಗುತ್ತಿಗೆ ನೀಡಲಾಗಿತ್ತು. ಅಕ್ಟೋಬರ್ 24ರಂದು ಒರೆವಾ ಗ್ರೂಪ್ ಅಧ್ಯಕ್ಷ ಜಯಸುಖ್ ಪಟೇಲ್ ಅವರು ಸೇತುವೆ ಸಾರ್ವಜನಿಕರ ಬಳಕೆಗೆ ಸುರಕ್ಷಿತವಾಗಿದೆ ಎಂದು ಘೋಷಿಸಿದ್ದ ಹಿನ್ನೆಲೆಯಲ್ಲಿ ಸೇತುವೆ ಸಾರ್ವಜನಿಕರಿಗೆ ಮುಕ್ತವಾಗಿತ್ತು.