ಪುಣೆ, ನ 05 (DaijiworldNews/DB): ಭಾರತ ಸೇರಿದಂತೆ ವಿಶ್ವದ ವಿವಿಧ ದೇಶಗಳಲ್ಲಿ ಆತಂಕ ಸೃಷ್ಟಿಸಿರುವ ಮಂಕಿಪಾಕ್ಸ್ ಸೋಂಕಿಗೆ ಲಸಿಕೆ ಅಭಿವೃದ್ದಿಪಡಿಸುವ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಸಲಾಗಿದೆ ಎಂದು ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಮುಖ್ಯಸ್ಥ ಆಧಾರ್ ಪೂನಾವಾಲ ಘೋಷಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಕಿಪಾಕ್ಸ್ಗೆ ಲಸಿಕೆ ತಯಾರಿಕೆ ನಿಟ್ಟಿನಲ್ಲಿ ಈಗಾಗಲೇ ಚರ್ಚೆ ನಡೆದಿದ್ದು, ಶೀಘ್ರ ಇದು ಕಾರ್ಯರೂಪಕ್ಕೆ ಬರುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಮೆಸೆಂಜರ್ ಆರ್ಎನ್ಎ (ಎಂಆರ್ಎನ್ಎ) ಲಸಿಕೆಯನ್ನು ಅಭಿವೃದ್ಧಿಪಡಿಸಲು ನೊವೊವಾಕ್ಸ್ನೊಂದಿಗೆ ಈಗಾಗಲೇ ಚರ್ಚೆ ನಡೆಸಲಾಗಿದೆ ಎಂದರು.
ಇನ್ನು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸಿಡುಬು ಲಸಿಕೆಯನ್ನೇ ದೊಡ್ಡ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ಮುಂದಿನ ಮೂರು ತಿಂಗಳಲ್ಲಿ ಡೆನ್ಮಾರ್ಕ್ನ ಬವೇರಿಯನ್ ನಾರ್ಡಿಕ್ನಿಂದ ಭಾರತಕ್ಕೆ ಸಿಡುಬು ಲಸಿಕೆಗಳನ್ನು ತರಿಸಬಹುದು. ತಾಂತ್ರಿಕ ಜ್ಞಾನಕ್ಕಾಗಿ ವಿದೇಶಿ ಲಸಿಕೆ ಪಾಲುದಾರರೊಂದಿಗೆ ಚರ್ಚಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದವರು ತಿಳಿಸಿದರು.
ವಿವಿಧ ತಂತ್ರಜ್ಞಾನಗಳನ್ನು ಬಳಸಿ ಮಂಕಿಪಾಕ್ಸ್ಗೆ ಲಸಿಕೆ ತಯಾರಿಸಲಾಗುತ್ತದೆ. ಇದರ ನಿರ್ವಹಣೆಗಾಗಿ ವಿಶೇಷ ಕಂಟೈನ್ಮೆಂಟ್ ಸೌಲಭ್ಯ ಕೂಡಾ ಅಗತ್ಯವಿದೆ. ಇದು ಕೋವಿಡ್ ಲಸಿಕೆಗಿಂತ ಭಿನ್ನವಾಗಿರಲಿದೆ ಎಂದವರು ವಿವರಿಸಿದರು.
ಭಾರತದಲ್ಲಿ ಈ ಲಸಿಕೆ ತಯಾರಿಕೆಗೆ ನಾವಿನ್ನೂ ಸಿದ್ದಗೊಂಡಿಲ್ಲದ ಕಾರಣ ವಿದೇಶೀ ಪಾಲುದಾರರೊಂದಿಗೆ ಮಾತುಕತೆ ನಡೆಸಲಾಗುತ್ತಿದೆ. ಆದರೆ ನಮ್ಮಲ್ಲಿ ಕೆಲವು ಸೌಲಭ್ಯಗಳಿರುವುದರಿಂದ ಮುಂದಿನ ದಿನಗಳಲ್ಲಿ ಈ ಪರಿಸ್ಥಿತಿ ಬದಲಾಗಬಹುದು ಎಂದರು.