ಗುಜರಾತ್, ನ 05 (DaijiworldNews/DB): ಗುಜರಾತ್ ವಿಧಾನಸಭೆ ಚುನಾವಣೆಗೆ ಮುಹೂರ್ತ ನಿಗದಿಯಾದ ಬೆನ್ನಲ್ಲೇ ಮಾಜಿ ಆರೋಗ್ಯ ಸಚಿವ ಜೈ ನಾರಾಯಣ ವ್ಯಾಸ್ ಅವರು ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ. ಇದರಿಂದ ಚುನಾವಣೆ ಹೊತ್ತಲ್ಲಿ ಬಿಜೆಪಿಗೆ ಅತಿದೊಡ್ಡ ಸಂಕಷ್ಟ ಎದುರಾದಂತಾಗಿದೆ.
2007ರಿಂದ 2012ರವರೆಗೆ ಜೈ ನಾರಾಯಣ ವ್ಯಾಸ್ ಅವರು ಬಿಜೆಪಿ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿ ಕೆಲಸ ಮಾಡಿದ್ದರು. ಇದೀಗ ಪಕ್ಷಕ್ಕೆ ರಾಜೀನಾಮೆ ನೀಡಿರುವ ಅವರು ಯಾವ ಪಕ್ಷಕ್ಕೆ ಸೇರಲಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿಲ್ಲ. ಆದರೆ ಅವರು ಆಮ್ ಆದ್ಮಿ ಪಕ್ಷ ಸೇರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಬಗ್ಗೆ ಮಾತುಕತೆಯನ್ನೂ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ಈ ನಡುವೆ ಕೆಲದ ದಿನಗಳ ಹಿಂದಷ್ಟೇ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನೂ ವ್ಯಾಸ್ ಭೇಟಿಯಾಗಿದ್ದರು. ಬಿಜೆಪಿ ತ್ಯಜಿಸಿದ ಬೆನ್ನಲ್ಲೇ ನರ್ಮದಾ ಕಾಲುವೆಯ ಗರಿಷ್ಠ ಉಪಯೋಗ ಮಾಡಿಕೊಳ್ಳುತ್ತಿರುವ ರಾಜಸ್ಥಾನದ ಸರ್ಕಾರವನ್ನು ಹೊಗಳುವ ಮೂಲಕ ಕಾಂಗ್ರೆಸ್ ಪರವಾಗಿ ಮಾತನಾಡಿದ್ದಾರೆ. ಆದರೆ ಅವರ ಈ ಮಾತಿನ ಹಿಂದಿನ ತಾತ್ಪರ್ಯದ ಬಗ್ಗೆ ತಿಳಿದು ಬಂದಿಲ್ಲ.
ಗುಜರಾತ್ ವಿಧಾನಸಭೆಗೆ ಡಿಸೆಂಬರ್ 1ರಂದು ಮೊದಲ ಹಂತದ ಮತ್ತು ಡಿಸೆಂಬರ್ 5ರಂದು ಎರಡನೇ ಹಂತದ ಮತದಾನ ನಡೆಯಲಿದ್ದು, ಡಿಸೆಂಬರ್ 8ಕ್ಕೆ ಫಲಿತಾಂಶ ಪ್ರಕಟವಾಗಲಿದೆ.