ಚೆನ್ನೈ, ನ 05 (DaijiworldNews/DB): ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್. ಧೋನಿ ಅವರು ಐಪಿಎಸ್ ಅಧಿಕಾರಿಯೊಬ್ಬರ ವಿರುದ್ದ ಮದ್ರಾಸ್ ಹೈಕೋರ್ಟ್ನಲ್ಲಿ ಕ್ರಮಿನಲ್ ನ್ಯಾಯಾಲಯ ನಿಂದನೆ ದಾವೆ ಹೂಡಿದ್ದಾರೆ.
ಐಪಿಎಸ್ ಅಧಿಕಾರಿ ಜಿ. ಸಂಪತ್ಕುಮಾರ್ ಅವರ ವಿರುದ್ದ ಧೋನಿ ದಾವೆ ಹೂಡಿದ್ದಾರೆ. ಸುಪ್ರೀಂಕೋರ್ಟ್ ಹಾಗೂ ಮದ್ರಾಸ್ ಹೈಕೋರ್ಟ್ ವಿರುದ್ದ ಐಪಿಎಸ್ ಅಧಿಕಾರಿಯು ಪ್ರಕರಣವೊಂದರ ವಿಚಾರಣೆ ವೇಳೆ ವ್ಯಕ್ತಪಡಿಸಿರುವ ಅಭಿಪ್ರಾಯದ ವಿರುದ್ದ ಧೋನಿ ಅವರು ಈ ದಾವೆ ಹೂಡಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ಐಪಿಎಸ್ ಅಧಿಕಾರಿ ಸಂಪತ್ಕುಮಾರ್ ಹಾಗೂ ಝೀ ಮೀಡಿಯಾ ಕಾರ್ಪೋರೇಶನ್ ಸಂಸ್ಥೆಯು ಧೋನಿ ವಿರುದ್ದ ಮ್ಯಾಚ್ ಫಿಕ್ಸಿಂಗ್ ಆರೋಪ ಮಾಡಿದ್ದಕ್ಕಾಗಿ ಸಂಸ್ಥೆ ಮತ್ತು ಅಧಿಕಾರಿ ವಿರುದ್ದ 100 ಕೋಟಿ ರೂ. ಪರಿಹಾರ ನೀಡುವಂತೆಯೂ ಒತ್ತಾಯಿಸಲಾಗಿದೆ.
ಅಪರಾಧ ನ್ಯಾಯಾಲಯ ನಿಂದನೆ ಪ್ರಕರಣ ಸಂಬಂಧಿಸಿ ವಿಚಾರಣೆ ನಡೆಸಲು ತಮಿಳುನಾಡಿನ ಅಡ್ವೊಕೇಟ್ ಜನರಲ್ ಆರ್.ಷಣ್ಮುಗ ಸುಂದರಂ ಅವರು ಅನುಮತಿ ನೀಡಿದ ಹಿನ್ನೆಲೆಯಲ್ಲಿ ಶುಕ್ರವಾರ ನ್ಯಾಯಮೂರ್ತಿ ಪಿ.ಎನ್.ಪ್ರಕಾಶ್ ನೇತೃತ್ವದ ವಿಭಾಗೀಯ ಪೀಠದ ಮುಂದೆ ಪ್ರಕರಣ ವಿಚಾರಣೆ ನಡೆಯುವುದರಲ್ಲಿತ್ತು. ಆದರೆ ಬಳಿಕ ಈ ವಿಚಾರಣೆ ನಡೆಯಲಿಲ್ಲ. ಮಂಗಳವಾರ ಮತ್ತೆ ಪ್ರಕರಣದ ವಿಚಾರಣೆ ಮುನ್ನೆಲೆಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.