ವಿಜಯನಗರ, ನ 04 (DaijiworldNews/SM): "ರೇಣುಕಾಚಾರ್ಯ ಅವರ ಅಣ್ಣನ ಮಗನ ಸಾವು ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಎಲ್ಲಾ ಆಯಾಮಗಳಲ್ಲಿ ಪ್ರಕರಣದ ತನಿಖೆ ಮಾಡುತ್ತೇವೆ" ಎಂದು ಗೃಹಸಚಿವ ಆರಗ ಜ್ಞಾನೇಂದ್ರ ವಿಜಯನಗರದಲ್ಲಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಚಂದ್ರಶೇಖರ್ನ ಸಂಶಯಾಸ್ಪದ ಸಾವಿನ ಬಗ್ಗೆ ರಾಜ್ಯದ ಪೊಲೀಸರೇ ತನಿಖೆ ನಡೆಸುತ್ತಾರೆ. ಸಿಓಡಿ ಸೇರಿದಂತೆ ಯಾವುದೇ ಬೇರೆ ಹಂತದ ತನಿಖೆಗೆ ಕೊಡುವುದಿಲ್ಲ. ನಮ್ಮ ಪೊಲೀಸರೇ ಸಮರ್ಥರಿದ್ದಾರೆ, ಅವರೇ ತನಿಖೆ ನಡೆಸುತ್ತಾರೆ. ನಾನೊಬ್ಬ ಗೃಹ ಮಂತ್ರಿಯಾಗಿ ಪ್ರಕರಣ ತನಿಖೆ ಹಂತದಲ್ಲಿ ಇರುವುದರಿಂದ ಈ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಅದು ಮತ್ತೇನೋ ಆಯಾಮ ಪಡೆಯುತ್ತದೆ. ಹಾಗಾಗಿ ತನಿಖೆ ನಡೆದ ಬಳಿಕ ನಾವು ಉತ್ತರ ನೀಡುತ್ತೇವೆ" ಎಂದರು.
ಶಾಸಕ ರೇಣುಕಾಚಾರ್ಯ ಅವರ ತಮ್ಮನ ಮಗ ಅಕ್ಟೋಬರ್ 31ರ ರಾತ್ರಿ ನಾಪತ್ತೆ ಆಗಿದ್ದರು. ಅವರನ್ನು ಎಲ್ಲ ಕಡೆ ಹುಡುಕುವ ಕೆಲಸ ನಡೆದಿತ್ತು. ಅಷ್ಟರಲ್ಲೇ ಕಾಲುವೆಯಲ್ಲಿ ಬಿದ್ದ ಕಾರಿನೊಳಗೆ ಅವರ ಶವ ಪತ್ತೆಯಾಗಿದೆ. ಈಗಾಗಲೇ ಮರಣೋತ್ತರ ಪರೀಕ್ಷೆ ನಡೆದಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ಸ್ಥಳದಿಂದ ಸಾಕ್ಷ್ಯಾಧಾರ ಸಂಗ್ರಹಿಸಿ ತನಿಖೆ ನಡೆಸುತ್ತಿದ್ದಾರೆ. ಶೀಘ್ರದಲ್ಲೇ ಸತ್ಯಾಂಶ ಹೊರಬರಲಿದೆ ಎಂದು ಹೇಳಿದರು.
ರೇಣುಕಾಚಾರ್ಯ ನನಗೂ ದಿನದಲ್ಲಿ 2-3 ಬಾರಿ ಕರೆ ಮಾಡುತ್ತಿದ್ದರು. ನಾನು ಅವರಿಗೆ ಕರೆ ಮಾಡಿ ಮಾತನಾಡುತ್ತಿದ್ದೆ. ಪ್ರಕರಣ ಸಂಬಂಧ ಅವರು ಶಂಕೆಗಳನ್ನು ವ್ಯಕ್ತಪಡಿಸಿದ್ದಾರೆ. ಎಲ್ಲಾ ಆಯಾಮದಲ್ಲೂ ತನಿಖೆ ನಡೆಸಲಾಗುತ್ತದೆ. ಶೀಘ್ರದಲ್ಲಿಯೇ ಹೊನ್ನಾಳಿಗೆ ಭೇಟಿ ನೀಡಿ ರೇಣುಕಾಚಾರ್ಯ ಅವರನ್ನು ಮಾತನಾಡಿಸುತ್ತೇನೆ ಎಂದು ತಿಳಿಸಿದ್ದಾರೆ. ಇದೇ ವೇಳೆ ಮಂಡ್ಯ ಘಟನೆ ಕುರಿತು ಮಾತನಾಡಿ, ಮಂಡ್ಯದಲ್ಲಿ ಆಸ್ಪತ್ರೆಗೆ ಹೊರಟವರನ್ನು ಅಡ್ಡ ಹಾಕಿ ಹೆಲ್ಮೆಟ್ ಹಾಕದಿದಕ್ಕೆ ಪೇದೆ ದಂಡ ವಿಧಿಸಿದ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಇದು ಖಂಡನೀಯವಾಗಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುತ್ತೇವೆ ಎಂದರು.