ಮದ್ರಾಸ್, ನ 04 (DaijiworldNews/DB): ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಎಲ್ಲಾ ಘಟನೆಗಳಿಗೆ ಶಿಕ್ಷಕರು ಅಥವಾ ಮುಖ್ಯೋಪಾಧ್ಯಾಯರನ್ನು ದೂಷಣೆ ಮಾಡುವುದು ಸರಿಯಲ್ಲ ಎಂದು ಮದ್ರಾಸ್ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
17 ವರ್ಷದ ವಿದ್ಯಾರ್ಥಿಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನ್ಯಾಯಮೂರ್ತಿ ಎಸ್.ಎಂ. ಸುಬ್ರಮಣ್ಯಂ ಅವರಿರುವ ಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಆತ್ಮಹತ್ಯೆಯಂತಹ ಘಟನೆಗಳಾದಾಗ ಸಾಕ್ಷ್ಯಾಧಾರಗಳಿಲ್ಲದಿದ್ದರೆ ಹೆತ್ತವರು ಶಿಕ್ಷೆಕರನ್ನು ಹೊಣೆಗಾರರನ್ನಾಗಿಸುವುದು, ಅವರ ಮೇಲೆ ಆರೋಪ ಹೊರಿಸುವುದು ತಪ್ಪು. ದೈಹಿಕ ಶಿಕ್ಷೆ ವಿಧಿಸಿದಲ್ಲಿ ಶಿಕ್ಷಕರ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ಅವಕಾಶವಿದೆ. ಆದರೆ ಎಲ್ಲಾ ಸಂದರ್ಭಗಳಲ್ಲಿ ಮಕ್ಕಳ ಕೃತ್ಯಗಳಿಗೆ ಶಿಕ್ಷಕರನ್ನೇ ಹೊಣೆಗಾರರನ್ನಾಗಿಸುವುದು ಸಲ್ಲ. ಒಂದು ವೇಳೆ ಆರೋಪಕ್ಕೆ ಸರಿಯಾಗಿ ಸಾಕ್ಷ್ಯಾಧಾರಗಳಿದ್ದರೆ ಮಾತ್ರ ಅವುಗಳನ್ನು ಪರಿಶೀಲಿಸಿ ಅಂತಹ ಶಿಕ್ಷಕರ ವಿರುದ್ದ ಕ್ರಮ ಕೈಗೊಳ್ಳಬಹುದು. ಅಂತಹ ಸಂದರ್ಭಗಳಲ್ಲಿ ಹೆತ್ತವರು ಸಾಕ್ಷಿಗಳನ್ನು ಒಪ್ಪಿಸಬಹುದು ಎಂದವರು ಪ್ರತಿಪಾದಿಸಿದರು.
2017ರಲ್ಲಿ ನಡೆದ 17 ವರ್ಷದ ಸರ್ಕಾರಿ ಶಾಲಾ ವಿದ್ಯಾರ್ಥಿಯ ಆತ್ಮಹತ್ಯೆ ಪ್ರಕರಣ ಸಂಬಂಧಿಸಿ ಆತನ ಸಾವಿಗೆ ಶಾಲಾ ಮುಖ್ಯೋಪಾಧ್ಯಾಯರ ಚಿತ್ರಹಿಂಸೆಯೇ ಕಾರಣ ಎಂದು ಆರೋಪಿಸಿ ಆತನ ತಾಯಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅಲ್ಲದೆ ಮುಖ್ಯೋಪಾಧ್ಯಾಯರ ವಿರುದ್ದ ಶಿಸ್ತು ಕ್ರಮ ಹಾಗೂ 10 ಲಕ್ಷ ರೂ. ಪರಿಹಾರಕ್ಕೆ ಆಗ್ರಹಿಸಿದ್ದರು.