ಕೊಯಮತ್ತೂರು, ನ 04 (DaijiworldNews/DB): ಅಕ್ಟೋಬರ್ 23ರಂದು ಕಾರು ಸ್ಫೋಟದಲ್ಲಿ ಮೃತಪಟ್ಟ ಜಮೇಶಾ ಮುಬಿನ್ನ ಮನೆಯಲ್ಲಿ ಸ್ಲೇಟ್ನಲ್ಲಿ ಮೂಲಭೂತವಾದಿ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಪರ ಕೈಬರಹ ಪತ್ತೆಯಾಗಿದ್ದು, ಅದನ್ನು ಎನ್ಐಎ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ.
ಅಲ್ಲಾಹನ ಮನೆ ಮುಟ್ಟಿದವರು ಬೇರು ಸಮೇತ ಕಿತ್ತು ಹೋಗುತ್ತಾರೆ ಎಂದು ತಮಿಳಿನಲ್ಲಿ ಬರೆಯಲಾಗಿದೆ. ಆತನ ಮನೆಯಿಂದ ವಶಪಡಿಸಿಕೊಳ್ಳಲಾದ ವಸ್ತುಗಳಲ್ಲಿ ಸ್ಲೇಟ್ನಲ್ಲಿ ಬರೆಯಲಾದ ಈ ಕೈ ಬರಹವೂ ಇತ್ತು. ಅಲ್ಲದೆ ಜಿಹಾದ್ ಕುರಿತ ಕೆಲವು ಬರಹ, ಐಸಿಸ್ ಪರವಾದ ರೇಖಾಚಿತ್ರಗಳೂ ವಶಪಡಿಸಿಕೊಂಡ ದಾಖಲೆಗಳಲ್ಲಿ ಇತ್ತು ಎಂದು ಪೊಲೀಸ್ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.
ಜಿಹಾದ್ ಮಕ್ಕಳು ಅಥವಾ ಹಿರಿಯರ ಕರ್ತವ್ಯವಲ್ಲ, ಅದು ಯುವಕರ ಕರ್ತವ್ಯ ಎಂಬರ್ಥವನ್ನು ನೀಡುವ ಕೈಬರಹದ ಟಿಪ್ಪಣಿಯನ್ನೂ ಪೊಲೀಸರು ಪತ್ತೆ ಮಾಡಿದ್ದಾರೆ. ಈ ಎಲ್ಲಾ ದಾಖಲೆಗಳನ್ನು ಆಧರಿಸಿ ಎನ್ಐಎ ಘಟನೆ ಸಂಬಂಧ ತನಿಖೆ ನಡೆಸಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಕ್ಟೋಬರ್ 23 ರಂದು ಉಕ್ಕಡಂನ ಕೊಟ್ಟೈ ಈಶ್ವರನ್ ದೇವಸ್ಥಾನದ ಹೊರಭಾಗದಲ್ಲಿ ಮುಬಿನ್ ಪ್ರಯಾಣಿಸುತ್ತಿದ್ದ ಕಾರಿನಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಆತ ಮೃತಪಟ್ಟಿದ್ದ. ಬಳಿಕ ಘಟನೆ ಬಗ್ಗೆ ಅನುಮಾನದ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಪೊಲೀಸರು ಮುಬಿನ್ ಮನೆಯಿಂದ 75 ಕೆಜಿ ಕಡಿಮೆ ತೀವ್ರತೆಯ ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದರು. ಅಲ್ಲದೆ ಆತನ ಆರು ಮಂದಿ ಸಹಚರರನ್ನು ಬಂಧಿಸಿದ್ದರು.