ಬೆಂಗಳೂರು, ನ 04 (DaijiworldNews/DB): ಆಸ್ಪತ್ರೆಗಳಲ್ಲಿ ಅಮಾನವೀಯವಾಗಿ ನಡೆದುಕೊಳ್ಳುವ ವೈದ್ಯರು, ವೈದ್ಯಾಧಿಕಾರಿಗಳನ್ನು ಕೆಲಸದಿಂದಲೇ ವಜಾಗೊಳಿಸುವ ನಿಟ್ಟಿನಲ್ಲಿ ಕಾನೂನಿನಲ್ಲಿ ಬದಲಾವಣೆ ತರಲು ಸಿಎಂ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ತಾಯಿ ಹಾಗೂ ನವಜಾತ ಶಿಶುಗಳು ಸಾವನ್ನಪ್ಪಿರುವ ವಿಚಾರವಾಗಿ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ಕಾನೂನು ತಿದ್ದುಪಡಿಯನ್ನು ಮುಂದಿನ ಅಧಿವೇಶನದಲ್ಲೇ ತರುವ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗುವುದು ಎಂದರು.
ಘಟನೆಯಲ್ಲಿ ವೈದ್ಯರು, ಸಿಬಂದಿ, ಜಿಲ್ಲಾ ಸರ್ಜನ್ ಅಮಾನವೀಯವಾಗಿ ನಡೆದುಕೊಂಡಿದ್ದು, ಕಾರಣ ಕೇಳಿ ಎಲ್ಲರಿಗೂ ನೋಟಿಸ್ ನೀಡಲಾಗಿದೆ. ಕರ್ತವ್ಯದಲ್ಲಿದ್ದ ವೈದ್ಯರಿಗೆ ಶೋಕಾಸ್ ನೋಟಿಸ್ ನೀಡಲಾಗಿದ್ದು, 24 ಗಂಟೆಯೊಳಗೆ ಉತ್ತರ ನೀಡಲು ಸೂಚಿಸಲಾಗಿದೆ ಎಂದರು.
ತುರ್ತು ಪರಿಸ್ಥಿತಿಯಲ್ಲಿ ರೋಗಿಯನ್ನು ದಾಖಲು ಮಾಡಿಕೊಳ್ಳಲು ಯಾವುದೇ ದಾಖಲೆಗಳು ಬೇಕಿಲ್ಲ, ಅವು ಮುಖ್ಯವೂ ಅಲ್ಲ. ಗರ್ಭಿಣಿ ಯಾವ ರಾಜ್ಯದವರೇ ಆದರೂ ದಾಖಲೆಯಿಲ್ಲದಕ್ಕೆ ಚಿಕಿತ್ಸೆ ನಿರಾಕರಿಸುವುದು ಸಲ್ಲ. ತಾಯಿ ಕಾರ್ಡ್, ಆಧಾರ್ ಕಾರ್ಡ್ಗಳನ್ನು ಚಿಕಿತ್ಸೆಯ ನಂತರವೂ ಪಡೆದುಕೊಳ್ಳಬಹುದು. ದಾಖಲೆಗಿಂತ ಜೀವ ಮುಖ್ಯ ಎಂಬುದನ್ನು ಸಿಬಂದಿ ಅರಿಯಬೇಕಿತ್ತು. ಈ ಬಗ್ಗೆ ಹಿಂದೆಯೇ ಸೂಚಿಸಲಾಗಿದ್ದರೂ, ಆಸ್ಪತ್ರೆಯಲ್ಲಿ ನಿರ್ಲಕ್ಷ್ಯ ವಹಿಸಲಾಗಿದೆ ಎಂದವರು ಆಕ್ರೋಶ ವ್ಯಕ್ತಪಡಿಸಿದರು.
ಆಸ್ಪತ್ರೆಯಲ್ಲಿ ಎಲ್ಲಾ ಸೌಲಭ್ಯಗಳಿದ್ದರೂ, ಸಿಬಂದಿ ಮಾಡಿದ ಎಡವಟ್ಟು ಸರ್ಕಾರಕ್ಕೆ ಮುಜುಗರ ತಂದಿದೆ. ಇದು ಮನುಜಕುಲಕ್ಕೇ ಕರಾಳ ದಿನವಾಗಿದೆ. ಮೃತರ ಕುಟುಂಬವನ್ನು ಸಂಪರ್ಕಿಸಲು ಪೊಲೀಸರು 36 ಗಂಟೆಗಳಿಂದ ಶ್ರಮಿಸುತ್ತಿದ್ದಾರೆ. ಆದರೆ ಯಾರೊಬ್ಬರೂ ಮುಂದೆ ಬಂದಿಲ್ಲ. ಇಂತಹ ಸ್ಥಿತಿಯಲ್ಲಿ ಸಂಪೂರ್ಣ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಳ್ಳಲಿದೆ ಎಂದರು.
ಇಂತಹ ವಿಚಾರದಲ್ಲಿಯೂ ಸಿದ್ದರಾಮಯ್ಯ ಅವರು ರಾಜಕೀಯ ಮಾಡುತ್ತಾರೆಂದರೆ ಅವರು ರಾಜಕೀಯವಲ್ಲ, ಉತ್ತಮ ಮಾನವನಾಗಲೂ ಅಸಾಧ್ಯ. ಅವರ ಅವಧಿಯಲ್ಲಿ ಮೈಸೂರಿನಲ್ಲಿ ಎಷ್ಟು ಶಿಶುಗಳು ಸಾವನ್ನಪ್ಪಿವೆ ಎಂಬ ದಾಖಲೆ ನೀಡುತ್ತೇನೆ ಎಂದು ಇದೇ ವೇಳೆ ತಿರುಗೇಟು ನೀಡಿದರು.