ತಿರುವನಂತಪುರಂ, ನ 04 (DaijiworldNews/DB): ಮೂರೂವರೆ ವರ್ಷದ ತಮ್ಮ ಮಗುವನ್ನು ಎತ್ತಿಕೊಂಡು ಮಹಿಳಾ ಜಿಲ್ಲಾಧಿಕಾರಿಯೊಬ್ಬರು ವೇದಿಕೆಯಲ್ಲಿ ಭಾಷಣ ಮಾಡಿರುವುದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ. ಕೆಲವರು ಜಿಲ್ಲಾಧಿಕಾರಿಯನ್ನು ಶ್ಲಾಘಿಸಿದರೆ, ಇನ್ನು ಕೆಲವರು ಸಾರ್ವಜನಿಕ ಸೇವೆಯಲ್ಲಿರುವ ಅಧಿಕಾರಿ ವರ್ತನೆ ಸರಿಯಲ್ಲ ಎಂದಿದ್ದಾರೆ.
ಕೇರಳದ ಪತ್ತನಂತಿಟ್ಟ ಜಿಲ್ಲೆಯ ಜಿಲ್ಲಾಧಿಕಾರಿ ದಿವ್ಯ ಎಸ್. ಅಯ್ಯರ್ ಅವರು ಸಾರ್ವಜನಿಕ ಕಾರ್ಯಕ್ರಮವೊಂದಕ್ಕೆ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ಮೂರೂವರೆ ವರ್ಷದ ತಮ್ಮ ಮಗುವನ್ನೂ ಕರೆ ತಂದಿದ್ದರು. ವೇದಿಕೆಯಲ್ಲಿ ಮಡಿಲಲ್ಲೇ ಮಗುವನ್ನು ಕುಳ್ಳಿರಿಸಿದ ಅಧಿಕಾರಿ ಬಳಿಕ ಭಾಷಣದ ಸರದಿ ಬಂದಾಗ ಮಗುವನ್ನು ಎತ್ತಿಕೊಂಡೇ ಭಾಷಣ ಮಾಡಿದ್ದರು. ಈ ವೀಡಿಯೋವನ್ನು ಕಾರ್ಯಕ್ರಮದ ಆಯೋಜಕ ವಿಧಾನಸಭೆಯ ಉಪಾಧ್ಯಕ್ಷ ಚಿಟ್ಟಾಯಂ ಗೋಪಕ್ಕುಮಾರ್ ಅವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದರು. 6ನೇ ಚಲನಚಿತ್ರೋತ್ಸವದಲ್ಲಿ ಜಿಲ್ಲಾಧಿಕಾರಿ ಮತ್ತು ಅವರ ಪುತ್ರ ಪಾಲ್ಗೊಂಡಿದ್ದರು ಎಂಬ ಅಡಿಬರಹದಲ್ಲಿ ಅವರು ಪೋಸ್ಟ್ ಪ್ರಕಟಿಸಿದ್ದರು.
ಇನ್ನು ಈ ಪೋಸ್ಟ್ಗೆ ಹಲವರು ಪ್ರತಿಕ್ರಿಯೆ ನೀಡಿದ್ದು, ಕೆಲವರು ಜಿಲ್ಲಾಧಿಕಾರಿ ಪರ ಕಾಮೆಂಟ್ ಮಾಡಿದ್ದರೆ, ಹಲವರು ಇದು ಸರಿಯಲ್ಲ ಎಂದಿದ್ದಾರೆ. ಉನ್ನತ ಹುದ್ದೆಯಲ್ಲಿರುವವರು ಸಾರ್ವಜನಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಾಗ ಈ ವರ್ತನೆ ತೋರುವುದು ಸರಿಯಲ್ಲ ಎಂದು ಕೆಲವರು ಹೇಳಿದ್ದರೆ, ಇನ್ನು ಕೆಲವರು ಮಹಿಳೆಯ ಜೀವನದಲ್ಲಿ ಆಕೆ ಹಲವು ಪಾತ್ರಗಳನ್ನು ನಿರ್ವಹಿಸುತ್ತಾಳೆ ಎಂದು ಜಿಲ್ಲಾಧಿಕಾರಿಯವರನ್ನು ಪ್ರಶಂಸಿದ್ದಾರೆ.