ತಲಶ್ಶೇರಿ, ನ 04 (DaijiworldNews/MS): ಇದಕ್ಕೆ ಅಹಂಕಾರದ ದುರ್ವತನೆಯನ್ನಬೇಕೋ, ಮಾನವೀಯತೆಯನ್ನು ಅಣುಕಿಸುವ ಘಟನೆ ಎನ್ನಬೇಕೋ ಗೊತ್ತಿಲ್ಲ. ಕೇರಳದ ತಲಶ್ಶೇರಿಯಲ್ಲಿ ಯುವಕನೊಬ್ಬ ಆರು ವರ್ಷದ ಬಾಲಕನ ಮೇಲೆ ಅಮಾನವೀಯವಾಗಿ ಹಲ್ಲೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ರಾಜಸ್ಥಾನ ಮೂಲದ ಗಣೇಶ್ ಎಂಬ ಬಾಲಕ ರಸ್ತೆ ಪಕ್ಕ ನಿಲ್ಲಿಸಿದ್ದ ಕಾರಿಗೆ ಒರಗಿ ನಿಂತಿದ್ದ. ಈ ವೇಳೆ ಅಲ್ಲಿಗೆ ಬಂದ ಪೊನ್ನಿಯಾಂಪಲಂ ನಿವಾಸಿ ಸಿಶಾದ್, ಬಾಲಕನನ್ನು ಜಾಡಿಸಿ ಒದ್ದಿದ್ದಾನೆ. ಇದರಿಂದ ಬಾಲಕನ ಬೆನ್ನಿಗೆ ನೋವಾಗಿ ಒದ್ದಾಡಿದ್ದಾನೆ. ಯುವಕ ಸಿಶಾದ್ ಜೊತೆ ಓರ್ವ ಮಹಿಳೆಯು ಇದ್ದು ಆಕೆಯೂ ಬಾಲಕನಿಗೆ ಸಂತೈಸದೇ ಆಕೆ ಕಾರು ಹತ್ತಿ ಕುಳಿತ್ತಿದ್ದಾಳೆ. .
ಇನ್ನು ವಿಡಿಯೋವನ್ನು ಗಂಭೀರವಾಗಿ ಪರಿಗಣಿಸಿರುವ ಕೇರಳ ಪೊಲೀಸರು ಆರೋಪಿ ಸಿಶಾದ್ನನ್ನು ಬಂಧಿಸಿದ್ದಾರೆ. ಜಾಮೀನು ರಹಿತ ಪ್ರಕರಣ ದಾಖಲಿಸಿ ಕಾರನ್ನು ಸಹ ಸೀಜ್ ಮಾಡಲಾಗಿದೆ.
ಕೆಲವು ಮಂದಿ ಸಿಶಾದ್ ಕೃತ್ಯವನ್ನು ನೋಡಿ, ಆತನ ಬಳಿ ಧಾವಿಸಿ ಪ್ರಶ್ನೆ ಮಾಡಿದ್ದಾರೆ. ಆದರೆ, ತನ್ನನ್ನು ತಾನು ಸಮರ್ಥನೆ ಮಾಡಿಕೊಂಡ ಸಿಶಾದ್, ಅಲ್ಲಿಂದ ಕಾಲ್ಕಿತ್ತಿದ್ದ. ಬಾಲಕ ಗಣೇಶ್ ಕೇರಳಕ್ಕೆ ಉದ್ಯೋಗ ಅರಸಿ ವಲಸೆ ಬಂದ ಕುಟುಂಬದ ಸದಸ್ಯನಾಗಿದ್ದಾನೆ.