ಮುಂಬೈ, ನ 04 (DaijiworldNews/MS): ತಲೋಜಾ ಸೆಂಟ್ರಲ್ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿರುವ ಗ್ಯಾಂಗ್ಸ್ಟರ್ ಎಜಾಜ್ ಲಕ್ಡಾವಾಲಾ ಅವರು ಸೊಳ್ಳೆ ತುಂಬಿದ ಪ್ಲಾಸ್ಟಿಕ್ ಬಾಟಲಿಯೊಂದಿಗೆ ಮುಂಬೈ ಸೆಷನ್ಸ್ ನ್ಯಾಯಾಲಯಕ್ಕೆ ಗುರುವಾರ ಆಗಮಿಸಿದ ಸ್ವಾರಸ್ಯಕರ ಘಟನೆ ನಡೆದಿದೆ.
ಜೈಲಿನಲ್ಲಿ ಸೊಳ್ಳೆಗಳ ಕಾಟದ ಬಗ್ಗೆ ಗಮನ ಸೆಳೆಯಲೆಂದು ಹಾಗೂ ಜೈಲಿನಲ್ಲಿ ಸೊಳ್ಳೆ ಪರದೆ ಪಡೆಯಲು , ಕೈದಿ ಲಕ್ಡಾವಾಲಾ ಸೊಳ್ಳೆಗಳನ್ನು ಹಿಡಿದ ಬಾಟಲಿಯನ್ನು ತೋರಿಸಿ ’ಹೆಚ್ಚಿನ ಕೈದಿಗಳು ಜೈಲಿನೊಳಗೆ ಪ್ರತಿದಿನ ಇದನ್ನು ಸಹಿಸಿಕೊಳ್ಳಬೇಕು ’ ಎಂದು ನ್ಯಾಯಾಧೀಶದ ಮುಂದೆ ಅವಲತ್ತುಕೊಂಡಿದ್ದಾನೆ.
ಜೈಲು ಅಧಿಕಾರಿಗಳು ಆತನ ಮನವಿಯನ್ನು ವಿರೋಧಿಸಿದ್ದು, ಸೊಳ್ಳೆ ಪರದೆಗಾಗಿ ಬಳಸವ ಹಗ್ಗ , ದಾರ, ಮೊಳೆಗಳಿಂದ ಸುರಕ್ಷತೆಗೆ ತೊಂದರೆಯುಂಟಾಗುತ್ತದೆ ಎಂದು ಹೇಳಿದ್ದಾರೆ.
ಲಕ್ಡಾವಾಲಾ ಯಾವುದೇ ಮೊಳೆ ಮತ್ತು ದಾರಗಳಿಲ್ಲದೆ ನೆಟ್ ಅನ್ನು ಬಳಸಲು ಅನುಮತಿ ನೀಡಿ ಎಂದಾಗ. "ಅರ್ಜಿದಾರ/ಆರೋಪಿ ನಂ.1 ಓಡೋಮೋಸ್ ಮತ್ತು ಇತರ ನಿವಾರಕಗಳನ್ನು ಬಳಸಬಹುದು ಮತ್ತು ಆದ್ದರಿಂದ ಮನವಿಯನ್ನು ತಿರಸ್ಕರಿಸಲಾಗಿದೆ" ಎಂದು ನ್ಯಾಯಾಲಯವು ಅವರ ಮನವಿಯನ್ನು ತಿರಸ್ಕರಿಸಿದೆ.
ಮೇ ತಿಂಗಳಲ್ಲಿ, ಭದ್ರತೆಯ ದೃಷ್ಟಿಯಿಂದ, ಜೈಲಿನಲ್ಲಿ ಖೈದಿಗಳು ಬಳಸುತ್ತಿದ್ದ ಸೊಳ್ಳೆ ಪರದೆಗಳನ್ನು ಜೈಲು ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಹೀಗಾಗಿ ವಿವಿಧ ನ್ಯಾಯಾಲಯಗಳಿಗೆ ನೆಟ್ಗಳನ್ನು ಬಳಸಲು ಅನುಮತಿ ಕೋರಿ ವಿಚಾರಣಾಧೀನ ಕೈದಿಗಳು ಅರ್ಜಿಗಳನ್ನು ಸಲ್ಲಿಸಲು ಪ್ರಾರಂಭಿಸಿದರು .
ಲಕ್ಡಾವಾಲಾ ಮಾತ್ರವಲ್ಲದೆ , ಇತರ ಕೈದಿಗಳೂ ಕೂಡಾ ಜೈಲಿನಲ್ಲಿ ಸೊಳ್ಳೆಗಳ ಹಾವಳಿ ತೀವ್ರವಾಗಿದ್ದು, ಬಲೆ ಬಳಕೆಗೆ ಅನುಮತಿ ನೀಡಬೇಕು ಎಂದು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ.