ಜಮ್ಮು, ನ 04 (DaijiworldNews/DB): ಜಮ್ಮು ಮತ್ತು ಕಾಶ್ಮೀರದ ಕಾರಾಗೃಹ ಇಲಾಖೆಯ ಪೊಲೀಸ್ ಮಹಾನಿರ್ದೇಶಕ ಹೇಮಂತ್ಕುಮಾರ್ ಲೋಹಿಯಾ ಹತ್ಯೆ ಪ್ರಕರಣದ ತನಿಖೆ ನಡೆಯುತ್ತಿದ್ದು, ಪ್ರಕರಣದಲ್ಲಿ ಭಯೋತ್ಪಾದಕರ ಪಾತ್ರದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ ಎಂದು ಜಮ್ಮು ವಲಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಮುಖೇಶ್ ಸಿಂಗ್ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಲೋಹಿಯಾ ಅವರ ಮನೆ ಕೆಲಸ ಮಾಡುತ್ತಿದ್ದ ಯಾಸಿರ್ ಲೋಹರ್ (23)ನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಆದರೆ ಲೋಹಿಯಾ ಹತ್ಯೆಯಲ್ಲಿ ಭಯೋತ್ಪಾದಕರ ಪಾತ್ರ ಇರುವುದು ವಿಚಾರಣೆಯಲ್ಲಿ ಗೊತ್ತಾಗಿಲ್ಲ ಎಂದರು.
1992ನೇ ಬ್ಯಾಚ್ ಐಪಿಎಸ್ ಅಧಿಕಾರಿ ಲೋಹಿಯಾ ಅವರು ಸೋಮವಾರ ತಡರಾತ್ರಿ ಜಮ್ಮುವಿನ ಹೊರವಲಯದಲ್ಲಿರುವ ಗೆಳೆಯನ ಮನೆಯಲ್ಲಿ ಕತ್ತು ಸೀಳಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕೊಲೆ ಪ್ರಕರಣದ ಹೊಣೆಯನ್ನು ಪೀಪಲ್ಸ್ ಆಂಟಿ-ಫ್ಯಾಸಿಸ್ಟ್ ಫ್ರಂಟ್ (ಪಿಎಎಫ್ಎಫ್) ಭಯೋತ್ಪಾದಕ ಸಂಘಟನೆಯು ಹೊತ್ತುಕೊಂಡಿತ್ತು. ಆದರೆ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಪೊಲೀಸ್ ಮಹಾ ನಿರ್ದೇಶಕ ದಿಲ್ಬಾಗ್ ಸಿಂಗ್, ಈ ಭಯೋತ್ಪಾದಕ ಸಂಘಟನೆಯು ನಾಚಿಕೆಯಿಲ್ಲದೆ ತನ್ನ ಕೃತ್ಯ ಎಂದು ವಿವಿಧ ಘಟನೆಗಳನ್ನು ಹೇಳಿಕೊಳ್ಳುತ್ತಿದೆ ಎಂದಿದ್ದರು.