ದಾವಣಗೆರೆ, ನ 03 (DaijiworldNews/DB): ನಾಪತ್ತೆಯಾಗಿದ್ದ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರ ಸಹೋದರನ ಪುತ್ರನ ಶವ ಹೊನ್ನಾಳಿ ತಾಲ್ಲೂಕಿನ ಹೆಚ್ ಕಡದಕಟ್ಟೆ ಬಳಿಯ ತುಂಗಾ ಕಾಲುವೆಯಲ್ಲಿ ಬಿದ್ದಿದ್ದ ಕಾರಿನೊಳಗೆ ಇಂದು ಸಂಜೆ ಪತ್ತೆಯಾಗಿದೆ.
ರೇಣುಕಾಚಾರ್ಯ ಸಹೋದರ ಎಂ.ಪಿ.ರಮೇಶ್ ಪುತ್ರ ಚಂದ್ರಶೇಖರ್ ಮೃತ ಯುವಕ. ಗೌರಿಗದ್ದೆಗೆ ಹೋಗಲು ಚಂದ್ರಶೇಖರ್ ಬಳಸಿದ್ದ ಕ್ರೆಟಾ ಕಾರಿನ ಅವಶೇಷಗಳು ಕಾಲುವೆ ಸಮೀಪ ಪತ್ತೆಯಾಗಿತ್ತು. ಇದೀಗ ಕಾರಿನಲ್ಲಿ ಚಂದ್ರಶೇಖರ್ ಅವರ ಶವ ಇರುವುದು ಕೂಡಾ ಪತ್ತೆಯಾಗಿದೆ. ಕಾರು ಸೇತುವೆಗೆ ಢಿಕ್ಕಿಯಾಗಿ ನೀರಿಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದೆ.
ಇನ್ನು ಕಾರಿನಲ್ಲಿ ಅವರು ಸಂಚರಿಸುತ್ತಿದ್ದ ಸಿಸಿಟಿವಿ ದೃಶ್ಯಾವಳಿಗಳೂ ಲಭ್ಯವಾಗಿದ್ದು, ಇದರಲ್ಲಿ ಕಾರಿನಲ್ಲಿ ಇಬ್ಬರು ಇದ್ದಂತೆ ಕಾಣುತ್ತಿದೆ. ಹೀಗಾಗಿ ಚಂದ್ರಶೇಖರ್ ಅವರೊಂದಿಗೆ ಕಾರಿನಲ್ಲಿ ಬೇರೆ ಯಾರಾದರೂ ಇದ್ದರೇ ಎಂಬ ಬಗ್ಗೆ ತಿಳಿದು ಬಂದಿಲ್ಲ. ಅಗ್ನಿಶಾಮಕ ಸಿಬ್ಬಂದಿ ಕ್ರೇನ್ ಬಳಸಿ ಕಾರ್ ಮೇಲಕೆತ್ತಿದ್ದಾರೆ. ಚಂದ್ರಶೇಖರ್ ಅವರ ಮೃತದೇಹವನ್ನು ಆಂಬುಲೆನ್ಸ್ ಮೂಲಕ ಸ್ಥಳಾಂತರಿಸಲು ಸಿದ್ದತೆ ನಡೆಸಲಾಗುತ್ತಿದೆ.
ಇನ್ನು ಪುತ್ರನನ್ನು ಕಳೆದುಕೊಂಡ ಮನೆಯವರ ಆಕ್ರಂದನ ಮುಗಿಲು ಮುಟ್ಟಿದೆ. ಪ್ರೀತಿಯ ಮಗನನ್ನು ಕಳೆದುಕೊಂಡ ಶಾಸಕ ರೇಣುಕಾಚಾರ್ಯ ಅವರೂ ಕಣ್ಣೀರಾಗಿದ್ದಾರೆ.
ಕಳೆದೈದು ದಿನಗಳಿಂದ ಚಂದ್ರಶೇಖರ್ ನಾಪತ್ತೆಯಾಗಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಲಾಗಿತ್ತು. ದಾವಣಗೆರೆ ಜಿಲ್ಲಾ ಎಸ್ ಪಿ ರಿಷ್ಯಂತ್ ನೇತೃತ್ವದಲ್ಲಿ 4 ತಂಡಗಳನ್ನು ರಚಿಸಿ ವಿವಿಧೆಡೆ ಚಂದ್ರಶೇಖರ್ಗಾಗಿ ಹುಡುಕಾಟ ನಡೆಸಲಾಗಿತ್ತು.