ಬೆಂಗಳೂರು, ನ 03 (DaijiworldNews/DB): ಗುಜರಾತ್ನ ಮೊರ್ಬಿಯಲ್ಲಿ ನಡೆದ ಸೇತುವೆ ದುರಂತದಲ್ಲಿ 130ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿರುವ ವಿಚಾರವಾಗಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇಂತಹ ನಿರ್ಲಕ್ಷ್ಯವೂ ದೇವರ ಆಟವೇ ಎಂದು ಪ್ರಶ್ನಿಸಿದ್ದಾರೆ.
ತೂಗುಸೇತುವೆ ಮುರಿತಕ್ಕೊಳಗಾದ ಘಟನೆಗೆ ನಿರ್ಲಕ್ಷ್ಯವೇ ಕಾರಣ ಎಂದು ಗುರುವಾರ ಟ್ವೀಟ್ ಮಾಡಿ ಜರೆದಿರುವ ಖರ್ಗೆ, ನಿರ್ಲಕ್ಷ್ಯಕ್ಕೆ ಕಾರಣಗಳನ್ನೂ ತಿಳಿಸಿದ್ದಾರೆ. ತುಕ್ಕು ಹಿಡಿದ ಕೇಬಲ್ಗಳ ನಾದುರಸ್ತಿ, ಫಿಟ್ನೆಸ್ ಪ್ರಮಾಣ ಪತ್ರವಿಲ್ಲದೆ, ಅಧಿಕಾರಿಗಳ ಒಪ್ಪಿಗೆರಹಿತವಾಗಿ ತೂಗುಸೇತುವೆಯನ್ನು ಸಾರ್ವಜನಿಕರಿಗೆ ಮುಕ್ತವಾಗಿಸಿರುವುದು, ಅಗತ್ಯ ಅರ್ಹತೆ ಹೊಂದಿಲ್ಲದ ಗುತ್ತಿಗೆದಾರನಿಗೆ ನಿರ್ವಹಣೆ ವಹಿಸಿದ್ದುದು ದುರಂತಕ್ಕೆ ಕಾರಣ ಎಂದವರು ಹೇಳಿದ್ದಾರೆ. ಅಲ್ಲದೆ ತೂಗುಸೇತುವೆ ಜನರ ಬಳಕೆಗೆ ಮುಕ್ತಗೊಳಿಸುವ ಮುನ್ನಾದಿನ ನಗರಸಭೆ ಮುಖ್ಯಸ್ಥನಿಗೆ ಮಾಹಿತಿ ಇದ್ದರೂ, ಯಾವುದೇ ಮುಂಜಾಗ್ರತೆ ವಹಿಸದಿರುವುದೂ ದುರಂತ ನಡೆಯಲು ಕಾರಣವಾಗಿದೆ ಎಂದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದುರಂತದಲ್ಲಿ ನೂರಾರು ಮಂದಿ ಸಾವನ್ನಪ್ಪಿದ್ದಾರೆ. ಆದರೆ ಗುತ್ತಿಗೆದಾರನ ಮೇಲಾಗಲೀ, ನಗರಸಭೆ ಅಧಿಕಾರಿಗಳ ಮೇಲಾಗಲೀ ಇಲ್ಲಿವರೆಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ಯಾಕೆ ಎಂದು ಇದೇ ವೇಳೆ ಖರ್ಗೆ ಪ್ರಶ್ನಿಸಿದ್ದಾರೆ.
ಇನ್ನು ಕೋಲ್ಕತ್ತಾದಲ್ಲಿ ಸೇತುವೆ ಕುಸಿತಗೊಂಡು ಹಲವರು ಸಾವನ್ನಪ್ಪಿದ್ದ ಸಂದರ್ಭದಲ್ಲಿ ಅಲ್ಲಿನ ಸಿಎಂ ಮಮತಾ ಬ್ಯಾನರ್ಜಿಯವರನ್ನು ಗುರಿಯಾಗಿಸಿ ಪ್ರಧಾನಿ ನರೇಂದ್ರ ಮೋದಿಯವರು ಇದು ಭಗವಂತನ ಆಟವಲ್ಲ, ವಂಚನೆಯ ಆಟ ಎಂಬರ್ಥದ ಹೇಳಿಕೆ ನೀಡಿದ್ದರು. ಪ್ರಧಾನಿಯವರ ಈ ಹೇಳಿಕೆಗೆ ಪರೋಕ್ಷವಾಗಿ ತಿರುಗೇಟು ನೀಡಿರುವ ಖರ್ಗೆ, ಇಂತಹ ನಿರ್ಲಕ್ಷ್ಯವೂ ದೇವರ ಆಟವೇ ಎಂದು ಪ್ರಶ್ನಿಸಿದ್ದಾರೆ.
ಇನ್ನು ಘಟನೆ ಸಂಬಂಧ ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಇದೇ ವೇಳೆ ಅವರು ಪ್ರಧಾನಿಯವರನ್ನು ಆಗ್ರಹಿಸಿದ್ದಾರೆ.