ನವದೆಹಲಿ, ನ 03 (DaijiworldNews/DB): ಗುಜರಾತ್ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಗೆಲುವು ನಿಶ್ಚಿತ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಗುಜರಾತ್ ವಿಧಾನಸಭೆಗೆ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಗುರುವಾರ ಒಂದು ನಿಮಿಷದ ವೀಡಿಯೊ ಸಂದೇಶ ಬಿಡುಗಡೆ ಮಾಡಿರುವ ಅವರು, ನಾನು ನಿಮ್ಮ ಕುಟುಂಬ ಸದಸ್ಯ, ನಿಮ್ಮ ಸಹೋದರನಿದ್ದಂತೆ. ನಮಗೆ ಒಂದು ಅವಕಾಶ ನೀಡಿ. ಉಚಿತ ವಿದ್ಯುತ್ ನೀಡುತ್ತೇವೆ. ಗುಣಮಟ್ಟದ ಶಿಕ್ಷಣ ಸಿಗುವ ಶಾಲೆ ಮತ್ತು ಗುಣಮಟ್ಟದ ಸೇವೆ ಸಿಗುವ ಆಸ್ಪತ್ರೆಗಳನ್ನು ಕಟ್ಟಿಸಿಕೊಡುತ್ತೇನೆ ಎಂದು ಗುಜರಾತಿಗಳಲ್ಲಿ ಮನವಿ ಮಾಡಿದ್ದಾರೆ.
ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿ ಆಡಳಿತದ ಚುಕ್ಕಾಣಿ ಹಿಡಿದ ಆಮ್ ಆದ್ಮಿ ಪಕ್ಷ ಇದೀಗ ಗುಜರಾತ್ನಲ್ಲಿಯೂ ಅಧಿಕಾರ ಗಳಿಸುವ ಗುರಿಯೊಂದಿಗೆ ಸಕ್ರಿಯವಾಗಿದೆ.
ಗುಜರಾತ್ನಲ್ಲಿ ಕಳೆದ ಎರಡು ದಶಕಗಳಿಂದ ಬಿಜೆಪಿ ಅಧಿಕಾರದಲ್ಲಿದೆ. ಈ ಬಾರಿ ಗುಜರಾತ್ನಲ್ಲಿ ಬಿಜೆಪಿ ಮತ್ತು ಆಮ್ ಆದ್ಮಿ ಪಕ್ಷದ ನಡುವೆ ಭಾರೀ ಪೈಪೋಟಿ ಇದ್ದು, ಪ್ರಧಾನಿ ತವರು ರಾಜ್ಯವನ್ನು ತನ್ನಲ್ಲೇ ಉಳಿಸಿಕೊಳ್ಳುವ ಉಮೇದಿನಲ್ಲಿ ಬಿಜೆಪಿಯಿದ್ದರೆ, ಪ್ರಧಾನಿ ಮೋದಿ ತವರು ರಾಜ್ಯವನ್ನು ತನ್ನದಾಗಿಸಿಕೊಳ್ಳುವ ನಿಟ್ಟಿನಲ್ಲಿ ಎಎಪಿಯು ಭಾರೀ ಪ್ರಚಾರ ಕಾರ್ಯ ನಡೆಸುವುದರೊಂದಿಗೆ ಜನರಿಗೆ ಹಲವು ಆಶ್ವಾಸನೆಗಳನ್ನು ನೀಡುತ್ತಿದೆ. ಆಮ್ ಆದ್ಮಿ ಪಕ್ಷದಿಂದ ಭಾರೀ ಪೈಪೋಟಿ ಎದುರಾಗಿರುವುದರಿಂದ ಬಿಜೆಪಿಗೆ ಇದು ಪ್ರತಿಷ್ಠೆಯ ಚುನಾವಣೆಯಾಗಿದೆ.
ಗುಜರಾತ್ನಲ್ಲಿ ಒಟ್ಟು 182 ವಿಧಾನಸಭಾ ಕ್ಷೇತ್ರಗಳಿವೆ. ಈ ಪೈಕಿ 90-95 ಕ್ಷೇತ್ರಗಳಲ್ಲಿ ಎಎಪಿ ಜಯ ಸಾಧಿಸುವುದು ಖಚಿತ. ಅಲ್ಲದೆ ವಾತಾವರಣವು ಈಗಿನಂತೆಯೇ ಮುಂದುವರಿದರೆ 140-150 ಕ್ಷೇತ್ರಗಳಲ್ಲಿ ಆಮ್ ಆದ್ಮಿ ಪಕ್ಷ ಗೆಲುವು ಸಾಧಿಸಲಿದೆ ಎಂದು ಆಮ್ ಆದ್ಮಿ ಪಕ್ಷದ ಹಿರಿಯ ವಕ್ತಾರ ಸೌರಭ್ ಭಾರಧ್ವಜ್ ಹೇಳಿದ್ದಾರೆ.