ಕೇರಳ, ನ 03 (DaijiworldNews/DB): ನಾನು ರಾಜಕೀಯ ಹಸ್ತಕ್ಷೇಪ ಮಾಡಿರುವ ಒಂದೇ ಒಂದು ಉದಾಹರಣೆಯನ್ನು ಸಾಬೀತುಪಡಿಸಿದರೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತೋರಿಸಲಿ. ಹಾಗಾದಲ್ಲಿ ಖಂಡಿತಾ ರಾಜೀನಾಮೆ ನೀಡುತ್ತೇನೆ ಎಂದು ಕೇರಳ ರಾಜ್ಯಪಾಲ ಆರೀಫ್ ಮೊಹಮದ್ ಖಾನ್ ಬಹಿರಂಗ ಸವಾಲು ಹಾಕಿದ್ದಾರೆ.
ವಿಶ್ವವಿದ್ಯಾನಿಲಯಗಳ ಉಪಕುಲಪತಿಗಳ ನೇಮಕದಲ್ಲಿ ರಾಜ್ಯಪಾಲರು ರಾಜಕೀಯ ಹಸ್ತಕ್ಷೇಪ ನಡೆಸುತ್ತಿದ್ದಾರೆ ಎಂಬ ಸಿಎಂ ಪಿಣರಾಯಿ ವಿಜಯನ್ ಅವರ ಆರೋಪದ ಕುರಿತು ಪ್ರತಿಕ್ರಿಯಿಸಿದ ಕೇರಳ ರಾಜ್ಯಪಾಲರು, ವಿಶ್ವ ವಿದ್ಯಾನಿಲಯಗಳಲ್ಲಿ ಆರೆಸ್ಸೆಸ್ ಹಿನ್ನೆಲೆ ಹೊಂದಿರುವ ವ್ಯಕ್ತಿಗಳನ್ನು ನೇಮಕ ಮಾಡುತ್ತಿದ್ದೇನೆ ಎಂಬುದಾಗಿ ಸಿಎಂ ಹೇಳುತ್ತಿದ್ದಾರೆ. ಆದರೆ ನನ್ನ ಅಧಿಕಾರವನ್ನು ನಾನು ಈ ರೀತಿ ದುರುಪಯೋಗಪಡಿಸಿಕೊಂಡ ಯಾವುದೆ ಉದಾಹರಣೆಯನ್ನು ಅವರು ಸಾಬೀತುಪಡಿಸಿದರೂ ನಾನು ರಾಜೀನಾಮೆ ನೀಡಲು ಸಿದ್ದನಿದ್ದೇನೆ. ಆದರೆ ಅದು ಅಸಾಧ್ಯವಾದಲ್ಲಿ ಪಿಣರಾಯಿ ವಿಜಯನ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ದರಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಕೇರಳ ವಿವಿ ಸಂಬಂಧಿಸಿದ ಪ್ರತಿ ಕಡತವನ್ನೂ ಕಳೆದೊಂದು ತಿಂಗಳಿನಿಂದ ಹಿಂತಿರುಗಿಸಿದ್ದೇನೆ. ಆದರೆ ರಾಜ್ಯಪಾಲರ ಕರೆಗೆ ಸಿಎಂ ಸ್ಪಂದನೆ ಮಾಡುತ್ತಿಲ್ಲ. ಆ ಮೂಲಕ ಅವರು ಮಿತಿ ದಾಟುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.