ನವದೆಹಲಿ, ನ 03 (DaijiworldNews/DB): ಕೆಂಪುಕೋಟೆ ಮೇಲೆ 2000ರಲ್ಲಿ ನಡೆದ ದಾಳಿ ಪ್ರಕರಣ ಸಂಬಂಧಿಸಿ ಲಕ್ಷರ್-ಎ-ತೊಯ್ಬಾಕ್ಕೆ ಸೇರಿದ ಭಯೋತ್ಪಾದಕ ಮೊಹಮ್ಮದ್ ಆರಿಫ್ಗೆ ವಿಧಿಸಲಾಗಿದ್ದ ಗಲ್ಲು ಶಿಕ್ಷೆ ತೀರ್ಪನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ.
ತನ್ನ ಮೇಲಿನ ಅಪರಾಧ ಮತ್ತು ಗಲ್ಲು ಶಿಕ್ಷೆಯನ್ನು ಪ್ರಶ್ನಿಸಿ ಈತ ಸುಪ್ರೀಂಕೋರ್ಟ್ಗೆ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದ. ಆದರೆ ಮರುಪರಿಶೀಲನಾ ಅರ್ಜಿಯನ್ನು ಗುರುವಾರ ತಿರಸ್ಕರಿಸಿದ ಮುಖ್ಯ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ಮತ್ತು ನ್ಯಾಯಮೂರ್ತಿ ಬೇಲಾ ಎಂ ತ್ರಿವೇದಿ ಅವರನ್ನೊಳಗೊಂಡ ಪೀಠವು ಭಯೋತ್ಪಾದಕ ಮೊಹಮ್ಮದ್ ಆರಿಫ್ಗೆ ವಿಧಿಸಲಾಗಿದ್ದ ಗಲ್ಲು ಶಿಕ್ಷೆ ತೀರ್ಪನ್ನು ಎತ್ತಿ ಹಿಡಿದಿದೆ. ಅಲ್ಲದೆ ಘಟನೆ ಸಂಬಂಧಿಸಿ ಈಗಾಗಲೇ ತನಿಖೆ ನಡೆದಿದ್ದು, ಎಲ್ಲಾ ಸಾಕ್ಷಿಗಳು ಅಪರಾಧವನ್ನು ಸಾಕ್ಷೀಕರಿಸಿವೆ. ಹೀಗಾಗಿ ಮರುಪರಿಶೀಲನೆ ಅಗತ್ಯ ಇಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಸುಪ್ರೀಂಕೋರ್ಟ್ ಗುರುವಾರ ಉಗ್ರನ ಮರುಪರಿಶೀಲನಾ ಅರ್ಜಿಯನ್ನು ತಿರಸ್ಕರಿಸುವುದರೊಂದಿಗೆ ಉಗ್ರ ಮೊಹಮ್ಮದ್ ಆರಿಫ್ ಗೆ ಗಲ್ಲುಶಿಕ್ಷೆ ಖಾಯಂ ಆಗಿದೆ. 2000ರಲ್ಲಿ ಕೆಂಪುಕೋಟೆ ಮೇಲೆ ನಡೆದ ದಾಳಿಯಲ್ಲಿ ಇಬ್ಬರು ಸೈನಿಕರು ಸೇರಿದಂತೆ ಒಟ್ಟು ಮೂವರು ಸಾವನ್ನಪ್ಪಿದ್ದರು.