ನವದೆಹಲಿ, ನ 03 (DaijiworldNews/DB): ಕೊರತೆ, ಒತ್ತಡದಿಂದ ಸೃಷ್ಟಿಯಾದ ವ್ಯವಸ್ಥೆ ಬದಲಾವಣೆಗಾಗಿ ಕಳೆದ ಎಂಟು ವರ್ಷಗಳಿಂದ ನಾವು ಕಾರ್ಯೋನ್ಮುಖರಾಗಿದ್ದೇವೆ. ಆತ್ಮನಿರ್ಭರ ಹಾಗೂ ಸೌಲಭ್ಯ ಸುಧಾರಣೆಯೇ ನಮ್ಮ ಆದ್ಯತೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ದೆಹಲಿಯಲ್ಲಿ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮವನ್ನು ಉದ್ದೇಶಿಸಿ ಗುರುವಾರ ಮಾತನಾಡಿದ ಅವರು, ಸರ್ಕಾರ ನಿಜವಾದ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಯೋಜನೆಗಳು ನೇರವಾಗಿ ಸಿಗುವಂತೆ ಮಾಡುವಲ್ಲಿ ಶ್ರಮಿಸುತ್ತಿದೆ. ನೇರ ನಗದು ವರ್ಗಾವಣೆ ಸೌಲಭ್ಯ ಮೂಲಕ 2 ಲಕ್ಷ ಕೋಟಿ ರೂಗಳಿಗೂ ಅಧಿಕ ಹಣ ನಿಜವಾದ ಫಲಾನುಭವಿಗಳ ಪಾಲಾಗಿದೆ ಎಂದರು.
ಸೌಲಭ್ಯಗಳ ಸುಧಾರಣೆ, ಅತ್ಯಾಧುನಿಕ ತಂತ್ರಜ್ಞಾನ ಮತ್ತು ಆತ್ಮನಿರ್ಭರದ ಮೂಲಕ ವ್ಯವಸ್ಥೆಗಳ ಬದಲಾವಣೆಗೆ ಶ್ರಮ ವಹಿಸುತ್ತಿದ್ದೇವೆ. ಇದಕ್ಕಾಗಿ ಕಳೆದ ಎಂಟು ವರ್ಷಗಳಿಂದ ತೊಡಗಿಸಿಕೊಂಡಿದ್ದೇವೆ ಎಂದು ಮೋದಿ ತಿಳಿಸಿದರು.
ಕೇಂದ್ರದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೇರಿದ ಬಳಿಕ ಹಗರಣಗಳಿಗೆ ಅವಕಾಶ ಇಲ್ಲದಾಗಿದೆ. ರಕ್ಷಣಾ ವಲಯದಲ್ಲಿ ಸ್ವಾವಲಂಬನೆ ಸೃಷ್ಟಿಯಾಗಿದೆ ಎಂದರು.
ಪ್ರಾಮಾಣಿಕತೆ, ಪಾರದರ್ಶಕ ಮತ್ತು ಸಾರ್ವಜನಿಕ ಸೇವೆಗಾಗಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ತಮ್ಮ ಜೀವನವನ್ನು ಮುಡಿಪಾಗಿಟ್ಟವರು. ಅಂತಹ ಮಹನೀಯರ ಜನ್ಮ ದಿನದ ಸಂದರ್ಭದಲ್ಲಿ ಜಾಗೃತಿ ಅರಿವು ಸಪ್ತಾಹ ನಡೆಯುತ್ತಿರುವುದು ಹೆಮ್ಮೆಯ ವಿಚಾರ ಎಂದು ಪ್ರಧಾನಿ ಮೋದಿ ಶ್ಲಾಘಿಸಿದರು.