ರಾಯ್ಪುರ್, ನ 03 (DaijiworldNews/DB): ಆನೆ, ಕರಡಿಗಳ ಕಾಟದಿಂದ ನೊಂದಿದ್ದ ರಾಯ್ಪುರದ ಜನರಿಗೆ ಇದೀಗ ಮಂಗಗಳ ಕಾಟದ ಹೊಸ ತಲೆನೋವು ಶುರುವಾಗಿದ್ದು, 11 ಮಂದಿಯನ್ನು ಒಂಟಿ ಮಂಗವೊಂದು ಕಚ್ಚಿ ಗಾಯಗೊಳಿಸಿವೆ.
ಛತ್ತೀಸ್ಗಢದ ಅರಣ್ಯದಿಂದ ಈ ಮಂಗಗಳು ಗ್ರಾಮೀಣ ಭಾಗಗಳಿಗೆ ಬರುತ್ತಿದ್ದು, ಜನರಲ್ಲಿ ಭೀತಿಗೆ ಕಾರಣವಾಗಿದೆ. ದುರ್ಗ ಜಿಲ್ಲೆಯ ಆರು ವಾರ್ಡ್ಗಳಲ್ಲಿ ಮಂಗಗಳ ಕಾಟ ಅತಿಯಾಗಿದೆ. ಮಂಗವೊಂದು ತನ್ನ ಹಿಂಡಿನಿಂದ ಬೇರ್ಪಟ್ಟು 11 ಮಂದಿಯ ಮೇಲೆ ದಾಳಿ ನಡೆಸಿದ್ದು, ತೀವ್ರವಾಗಿ ಗಾಯಗೊಂಡಿದ್ದಾರೆ. ಈ ಪೈಕಿ ಇಬ್ಬರಿಗೆ ತೀವ್ರತರವಾದ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಸ್ಪಿ ಬಂಗಲೆ ಬಳಿಯ ನಿವಾಸಿ ಪೂರ್ಣಿಮಾ ಎಂಬಾಕೆಯ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಉಳಿದವರು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ದಾಳಿಕೋರ ಮಂಗನನ್ನು ಹಿಡಿಯಲು ಅರಣ್ಯ ಇಲಾಖೆ ಹರಸಾಹಸ ಪಟ್ಟಿದ್ದು, ಮೂರು ಜಿಲ್ಲೆಗಳ ರಕ್ಷಣಾ ತಂಡಗಳನ್ನು ಕರೆಸಿ ಮಂಗನನ್ನು ಹಿಡಿಯಲು ಕಾರ್ಯಾಚರಣೆ ನಡೆಸಲಾಯಿತು. ಅರಣ್ಯ ಇಲಾಖೆಯ ದುರ್ಗ್ ರಾಜನಂದಗಾಂವ್ ಮತ್ತು ರಾಯಪುರದ ರಕ್ಷಣಾ ತಂಡದ ನಿರಂತರ ಕಾರ್ಯಾಚರಣೆ ಬಳಿಕ ಮಂಗನನ್ನು ಹಿಡಿಯಲಾಗಿದೆ. ಕಳೆದೆರಡು ದಿನವನ್ನು ಇದಕ್ಕಾಗಿಯೇ ವ್ಯಯಿಸಲಾಯಿತು. ಕಸರ್ದಿಹ್ ಕೋಟೆ ಪ್ರದೇಶದಿಂದ ಕೋತಿಯನ್ನು ಹಿಡಿಯಲಾಗಿದೆ ಎಂದು ಡಿಎಫ್ಒ ದುರ್ಗ್ ಶಶಿ ಕುಮಾರ್ ತಿಳಿಸಿರುವುದಾಗಿ ವರದಿಯಾಗಿದೆ.