ಬೆಂಗಳೂರು,ನ 02(DaijiworldNews/MS): ಕರ್ನಾಟಕ ಸಂಪ್ರದಾಯ ಮತ್ತು ತಂತ್ರಜ್ಞಾನ ಹಾಗೂ ಪ್ರಕೃತಿ ಮತ್ತು ಸಂಸ್ಕೃತಿಯ ವಿಶಿಷ್ಟ ಸಂಗಮವಿರುವ ಸ್ಥಳವಾಗಿದೆ. ನಾವು ಪ್ರತಿಭೆ ಮತ್ತು ತಂತ್ರಜ್ಞಾನದ ಬಗ್ಗೆ ಮಾತನಾಡುವಾಗ, ಮೊದಲು ನೆನಪಿಗೆ ಬರುವುದು ’ಬ್ರ್ಯಾಂಡ್ ಬೆಂಗಳೂರು” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಇಂದಿನಿಂದ ನ. 4ರವರೆಗೆ ನಡೆಯಲಿರುವ ಇನ್ವೆಸ್ಟ್ ಕರ್ನಾಟಕ-2022 ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ವಿಡಿಯೋ ಕಾನ್ಪರೆನ್ಸ್ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, "ಭಾರತದ ಅಭಿವೃದ್ದಿಗೆ ಕರ್ನಾಟಕದ ಕೊಡುಗೆ ಅಪಾರ. ಇಲ್ಲಿನ ಉತ್ಪಾದನಾ ವಲಯಗಳು ಸಾಕಷ್ಟು ಗಟ್ಟಿಯಾಗಿದೆ. ಯುವಕರಿಗೆ ಭವಿಷ್ಯದ ದಾರಿ ಮಾಡಿ ಕೊಡಲಿದೆ. ಆಡಳಿತ ವ್ಯವಸ್ಥೆಯಲ್ಲಿ ಕೆಂಪುಪಟ್ಟಿಗೆ ವಿದಾಯ ಹೇಳಿ, ಹೂಡಿಕೆದಾರರಿಗೆ ಕೆಂಪು ಹಾಸಿನ ಸ್ವಾಗತ ನೀಡಬೇಕು. ರಕ್ಷಣೆ, ಡ್ರೋನ್ಗಳು, ಬಾಹ್ಯಾಕಾಶ ಮತ್ತು ಜಿಯೋಸ್ಪೇಷಿಯಲ್ ಮ್ಯಾಪಿಂಗ್ನಂತಹ ಖಾಸಗಿ ಹೂಡಿಕೆಗಳಿಗೆ ಈ ಹಿಂದೆ ಮುಚ್ಚಲಾಗಿದ್ದ ವಿವಿಧ ವಲಯಗಳಲ್ಲಿನ ಹೂಡಿಕೆಗಳನ್ನು ನಾವು ಪ್ರೋತ್ಸಾಹಿಸಿದ್ದೇವೆ. ಅಲ್ಲದೆ ಈ "ಬ್ರ್ಯಾಂಡ್ ಬೆಂಗಳೂರು " ಜಗತ್ತಿಗೆ ಮಾದರಿಯಾಗಲಿದೆ " ಎಂದು ಹೇಳಿದ್ದಾರೆ.
ಸಮಾವೇಶದಲ್ಲಿ ಕರ್ನಾಟಕದ ರಾಜ್ಯಪಾಲರು, ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಸಚಿವರಾದ ಪಿಯೂಶ್ ಗೋಯೆಲ್, ಪ್ರಲ್ಹಾದ್ ಜೋಶಿ, ಸ್ಮೃತಿ ಇರಾನಿ, ರಾಜೀವ್ ಚಂದ್ರಶೇಖರ್, ಶೋಭಾ ಕರಂದ್ಲಾಜೆ, ಎ. ನಾರಾಯಣಸ್ವಾಮಿ ಹಾಗೂ ಖ್ಯಾತ ಉದ್ಯಮಿಗಳು ಸಮ್ಮೇಳನದಲ್ಲಿ ಭಾಗಿಯಾಗಿದ್ದಾರೆ
ನವೆಂಬರ್ 4ರಂದು ಜಾಗತಿಕ ಹೂಡಿಕೆದಾರರ ಸಮಾವೇಶದ ಸಮಾರೋಪ ನಡೆಯಲಿದ್ದು, ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಭಾಗವಹಿಸಲಿದ್ದಾರೆ.