ಹೊನ್ನಾಳಿ, ನ 02(DaijiworldNews/MS): ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ , ಹೊನ್ನಾಳಿ ಕ್ಷೇತ್ರದ ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ ಅವರ ಸಹೋದರ ಎಂ.ಪಿ ರಮೇಶ್ ಅವರ ಎಂ. ಆರ್ ಪುತ್ರ ಚಂದ್ರಶೇಖರ್ ಎರಡು ದಿನಗಳಿಂದ ನಾಪತ್ತೆಯಾಗಿದ್ದಾರೆ.
ಎಂಜಿನಿಯರಿಂಗ್ ಶಿಕ್ಷಣ ಮುಗಿಸಿದ್ದ ಚಂದ್ರಶೇಖರ್ ಭಾನುವಾರದಿಂದ ನಾಪತ್ತೆಯಾಗಿದ್ದು , ಹೊನ್ನಾಳಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ಮಂಗಳವಾರ ದೂರು ದಾಖಲಾಗಿದೆ.
ಆಧ್ಯಾತ್ಮಿಕತೆಯಲ್ಲಿ ಹೆಚ್ಚು ಒಳವು ಹೊಂದಿದ್ದಂತ ಚಂದ್ರಶೇಖರ್ ಮೊಬೈಲ್ ಸ್ವಿಚ್ ಆಫ್ ಆಗಿರುವುದು ಆತಂಕಕ್ಕೆ ಕಾರಣವಾಗಿದೆ. ಕಳೆದ ಭಾನುವಾರ ಸಂಜೆ ಶಿವಮೊಗ್ಗ ಜಿಲ್ಲೆಯ ಗೌರಿಗದ್ದೆಯಲ್ಲಿ ವಿನಯ್ ಗುರೂಜಿಯವರನ್ನು ಹಾಗೂ ಸ್ನೇಹಿತ ಕಿರಣ್ ಭೇಟಿಯಾಗಿದ್ದು ಅಲ್ಲಿಂದ ರಾತ್ರಿ 11.56ಕ್ಕೆ ವಾಪಾಸ್ ಆಗಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಲ್ಲದೇ ಸೋಮವಾರ ಬೆಳಿಗ್ಗೆ 6.48ಕ್ಕೆ ಅವರ ಮೊಬೈಲ್ ಲಾಸ್ಟ್ ಲೊಕೇಶನ್ ತೋರಿಸುತ್ತಿದೆ.
ಹೀಗಾಗಿ ಇಂದು ತಮ್ಮ ಸಹೋದರನ ಪುತ್ರನನ್ನು ನೆನೆದಂತ ಶಾಸಕ ಎಂ.ಪಿ ರೇಣುಕಾಚಾರ್ಯ "ಚಂದ್ರು ಎಲ್ಲಿದ್ದೀಯಾ ಬಾರೋ" ಎಂಬುದಾಗಿ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟು ಮನೆಗೆ ಬರುವಂತೆ ವಿನಂತಿಸಿಕೊಂಡಿದ್ದಾರೆ.
ಶಾಸಕ ಎಂ.ಪಿ ರೇಣುಕಾಚಾರ್ಯ ಅವರ ಸಹೋದರನ ಪುತ್ರ ಚಂದ್ರಶೇಖರ್ ಹುಡುಕಾಟದಲ್ಲಿ ಪೊಲೀಸರು ತೊಡಗಿದ್ದಾರೆ. ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ ಸೇರಿದಂತೆ ವಿವಿಧೆಡೆ ಹುಡುಕಾಡುತ್ತಿದ್ದಾರೆ.