ಮೊರ್ಬಿ, ನ 01(DaijiworldNews/MS): 141 ಜನರ ಸಾವಿಗೆ ಕಾರಣವಾದ ಬೃಹತ್ ಸೇತುವೆ ಕುಸಿತದ ದುರಂತದಲ್ಲಿ ಗಾಯಗೊಂಡವರನ್ನು ಭೇಟಿ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಗುಜರಾತ್ ನ ಮೊರ್ಬಿಯ ಸಿವಿಲ್ ಆಸ್ಪತ್ರೆಗೆ ಭೇಟಿ ನೀಡಲಿದ್ದಾರೆ. ಪಿಎಂ ಮೋದಿ ಭೇಟಿ ನಿಗದಿಯಾದ ಬೆನ್ನಲ್ಲೇ ಆಸ್ಪತ್ರೆಯ ದುರಸ್ತಿ ಕಾರ್ಯ ನಡೆಯುತ್ತಿದ್ದು , ರಾತ್ರೋ ರಾತ್ರಿ ಸುಣ್ಣ ಬಣ್ಣ ಬಳಿಯಲಾಗುತ್ತಿದೆ.
ಸಿವಿಲ್ ಆಸ್ಪತ್ರೆಯ ನವೀಕರಣದ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್, " ಜನರು ಸತ್ತರೂ, ಪ್ರಧಾನಿ ಮೋದಿ ತಮ್ಮ ಕಾರ್ಯಕ್ರಮಕ್ಕಾಗಿ ತಯಾರಿ ನಡೆಸುತ್ತಿದ್ದಾರೆ ಇವರುಗಳಿಗೆ ನಾಚಿಕೆಯೂ ಆಗುವುದಿಲ್ಲ " ಎಂದು ಕಾಂಗ್ರೆಸ್ ಕಿಡಿಕಾರಿದೆ.
ಪ್ರಧಾನಿ ಮೋದಿ ಇಂದು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳನ್ನು ಮಾತನಾಡಿಸಲಿದ್ದಾರೆ. ಇದಕ್ಕಾಗಿ ರಾತ್ರಿಯ ವೇಳೆ ಏಕಾಏಕಿ ಆಸ್ಪತ್ರೆಯಲ್ಲಿ ತಯಾರಿ ಮಾಡಲಾಗಿದ್ದು, ಗೋಡೆಗಳು ಮತ್ತು ಚಾವಣಿಯ ಭಾಗಗಳಿಗೆ ಹೊಸದಾಗಿ ಬಣ್ಣ ಬಳಿಯಲಾಗಿದೆ. ಹೊಸ ವಾಟರ್ ಕೂಲರ್ ಗಳನ್ನು ತರಿಸಲಾಗಿದ್ದು, ಸೇತುವೆ ದುರಂತದಲ್ಲಿ ಗಾಯಗೊಂಡ ಸುಮಾರು 13 ಮಂದಿ ದಾಖಲಾಗಿರುವ ಆಸ್ಪತ್ರೆಯ ಎರಡು ವಾರ್ಡ್ಗಳಲ್ಲಿನ ಬೆಡ್ ಶೀಟ್ ಗಳನ್ನು ಸಹ ಬದಲಾಯಿಸಲಾಗಿದೆ ಎಂದು ವರದಿಯಾಗಿದೆ.
" ಪ್ರಧಾನಿಯವರ ಫೋಟೋಗಳು ಚೆನ್ನಾಗಿ ಬರಲು ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. , ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಇವರಿಲ್ಲಿ ಈವೆಂಟ್ ಮ್ಯಾನೇಜ್ ಮೆಂಟ್ ನಲ್ಲಿ ನಿರತರಾಗಿದ್ದಾರೆ" ಎಂದು ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಾರ್ಟಿ ಟೀಕಿಸಿದೆ.