ಮುಂಬಯಿ, ಅ 31 (DaijiworldNews/DB): ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯಗಳ ನಡುವೆ ತಾರತಮ್ಯ ಮಾಡದೆ, ಸಮಾನವಾಗಿ ಕಾಣಬೇಕು ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆ ಹೇಳಿದ್ದಾರೆ.
ಮುಂಬಯಿಯಲ್ಲಿ ಮಾತನಾಡಿದ ಅವರು, ಪ್ರತಿ ಯೋಜನೆಗಳು ಕೇವಲ ಗುಜರಾತ್ಗೆ ಮಾತ್ರ ಯಾಕೆ ಹೋಗುತ್ತಿದೆ? ಇಡೀ ದೇಶಕ್ಕೇ ಪ್ರಧಾನಿಯಾಗಿರುವ ಮೋದಿಯವರಿಗೆ ಎಲ್ಲಾ ರಾಜ್ಯಗಳನ್ನೂ ಅಭಿವೃದ್ದಿ ಪಡಿಸುವ ಜವಾಬ್ದಾರಿ ಇದೆ. ಎಲ್ಲಾ ರಾಜ್ಯಗಳಿಗೆ ಏಕ ಸಮಾನತೆ ನೀಡಬೇಕು ಎಂದು ಆಗ್ರಹಿಸಿದರು.
ಪ್ರಧಾನಿ ರಾಜ್ಯವೊಂದರ ಕುರಿತು ಮಾತ್ರ ಚಿಂತಿಸಬಾರದು. ಇಡೀ ದೇಶದ ಚಿಂತನೆ ಅವರಲ್ಲಿರಬೇಕು. ಪ್ರತಿ ರಾಜ್ಯವೂ ಅಭಿವೃದ್ದಿ ಹೊಂದಬೇಕು, ಕೈಗಾರಿಕೆಗಳನ್ನು ಹೊಂದಿರಬೇಕು ಎಂಬುದು ಅವರಿಗೆ ಗೊತ್ತಿರಬೇಕು. ಇದರಿಂದ ಜನ ತಮ್ಮ ಊರು ಬಿಟ್ಟು ಹೊರ ರಾಜ್ಯಗಳಿಗೆ ಹೋಗುವುದು ತಪ್ಪುತ್ತದೆ. ಪ್ರತಿ ರಾಜ್ಯಗಳಿಗೂ ಒಳ್ಳೊಳ್ಳೆ ಯೋಜನೆಗಳು ಬಂದಾಗ ಇಡೀ ದೇಶ ಅಭಿವೃದ್ದಿಯಾಗುತ್ತದೆ ಎಂದವರು ಪ್ರತಿಪಾದಿಸಿದರು.
ಕೈಗಾರಿಕೀಕರಣದಲ್ಲಿ ಇತರ ರಾಜ್ಯಗಳಿಗಿಂತ ಮಹಾರಾಷ್ಟ್ರ ಮುಂದಿದೆ. ಉದ್ಯಮಿಗಳೂ ಈ ರಾಜ್ಯವನ್ನೇ ಆಯ್ಕೆ ಮಾಡುತ್ತಾರೆ. ಆದರೆ ಗುಜರಾತ್ನ ಯೋಜನೆಗಳಿಗೆ ಮಹಾರಾಷ್ಟ್ರ ಅನುಕೂಲಕರವಲ್ಲ ಎಂಬ ಭಾವನೆ ಬರಬಾರದು ಎಂದರು.