ಬೆಂಗಳೂರು, ಅ 31 (DaijiworldNews/DB): ಗುಜರಾತ್ನ ಮೊರ್ಬಿಯಲ್ಲಿ ತೂಗು ಸೇತುವೆ ಕುಸಿದು141 ಮಂದಿ ದಾರುಣ ಅಂತ್ಯ ಕಂಡ ಬೆನ್ನಲ್ಲೇ 2016ರಲ್ಲಿ ಕೋಲ್ಕತ್ತಾದಲ್ಲಿ ಸೇತುವೆ ಕುಸಿತಗೊಂಡ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಾಡಿದ ಮಾತುಗಳನ್ನು ಉಲ್ಲೇಖಿಸಿ ಪ್ರತಿಪಕ್ಷ ನಾಯಕ ಸಿದ್ದಾರಮಯ್ಯ ಅವರು ಟಾಂಗ್ ನೀಡಿದ್ದಾರೆ.
2016ರಲ್ಲಿ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣಾ ಸಂದರ್ಭದಲ್ಲಿ ಕೋಲ್ಕೊತ್ತಾದ ಮೇಲ್ಸೇತುವೆಯೊಂದು ಕುಸಿದು 27 ಮಂದಿ ಸಾವನ್ನಪ್ಪಿದ್ದರು. ಈ ಘಟನೆ ಕುರಿತಂತೆ ಪ್ರಧಾನಿ ನರೇಂದ್ರ ಮೋದಿಯವರು ಮಾತನಾಡುತ್ತಾ, ಪಶ್ವಿಮ ಬಂಗಾಳವನ್ನು ಟಿಎಂಸಿಯಿಂದ ಕಾಪಾಡಿಕೊಳ್ಳಲು ಇದು ದೇವರೇ ಕಳುಹಿಸಿದ ಸಂದೇಶ ಎಂದಿದ್ದರು.
ಮೋದಿಯವರ ಆಗಿನ ಹೇಳಿಕೆಯ ವೀಡಿಯೋ ಸಮೇತ ಸೋಮವಾರ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಚುನಾವಣಾ ಕಾಲದಲ್ಲಿ ಕೋಲ್ಕೊತ್ತಾದ ಮೇಲುಸೇತುವೆ ಕುಸಿದದ್ದು ಬಂಗಾಳಕ್ಕೆ ದೇವರು ಕಳಿಸಿದ್ದ ಸಂದೇಶ ಎನ್ನುವುದಾದರೆ, ಈಗ ಚುನಾವಣಾ ಕಾಲದಲ್ಲಿ ಗುಜರಾತ್ ತೂಗು ಸೇತುವೆ ಕುಸಿದಿರುವುದು ದೇವರು ಯಾರಿಗೆ ನೀಡಿರುವ ಸಂದೇಶ ಪ್ರಧಾನಿ ನರೇಂದ್ರ ಮೋದಿ ಅವರೇ? ಎಂದು ಕುಟುಕಿದ್ದಾರೆ.