ರೋಹ್ಟಕ್, ಅ 31 (DaijiworldNews/DB): ಮನೆಯವರ ವಿರೋಧದ ನಡುವೆ ಪ್ರೀತಿಸಿ ಮದುವೆಯಾಗಿ ಪೊಲೀಸ್ ಭದ್ರತೆಯಿಲ್ಲಿದ್ದ ಯುವಕನೋರ್ವ ಬಂಧನಕ್ಕೆ ಹೆದರಿ ವಧುವನ್ನು ಬಿಟ್ಟು ಕಿಟಕಿ ಮೂಲಕ ಪರಾರಿಯಾದ ಘಟನೆ ರೋಹ್ಟಕ್ನಲ್ಲಿ ನಡೆದಿದೆ.
ರೋಹ್ಟಕ್ನ ಸುಂದನಾ ಗ್ರಾಮದ ಪ್ರದೀಪ್ ಕುಮಾರ್ (28) ಎಂಬಾತ ಜಜ್ಜರ್ನ ಖುಂಗೈ ಗ್ರಾಮದ ಸವಿತಾ ಎಂಬಾಕೆಯನ್ನು ಮನೆಯವರ ವಿರೋಧದ ನಡುವೆ ಅಕ್ಟೋಬರ್ 14 ರಂದು ವಿವಾಹವಾಗಿದ್ದ. ದೇವಸ್ಥಾನವೊಂದರಲ್ಲಿ ಇವರಿಬ್ಬರ ವಿವಾಹ ನಡೆದಿತ್ತು. ವಿವಾಹದ ಬಳಿಕ ಮನೆಯೊಂದರಲ್ಲಿ ಪೊಲೀಸ್ ಭದ್ರತೆಯಲ್ಲಿ ದಂಪತಿ ತಂಗಿದ್ದರು. ಅಲ್ಲದೆ ಈ ಭದ್ರತೆ ನವೆಂಬರ್ 2ರವರೆಗೆ ನೀಡಲಾಗಿತ್ತು. ಆದರೆ ಇದೇ ವೇಳೆ ಯುವಕ ಪ್ರದೀಪ್ ವಿರುದ್ದ ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣಾ ಹಂತದಲ್ಲಿತ್ತು. ಇದರಿಂದ ಆತನಿಗೆ ಬಂಧನದ ಭಯ ಉಂಟಾಗಿದೆ. ಅದೊಂದು ದಿನ ತಂಗಿದ್ದ ಮನೆಯಲ್ಲಿ ವಧುವನ್ನು ಬಿಟ್ಟು ಮನೆಯ ಕಿಟಕಿ ಮೂಲಕ ಹಾರು ಪ್ರದೀಪ್ ಎಸ್ಕೇಪ್ ಆಗಿದ್ದಾನೆ.
ಇತ್ತ ಪತಿ ಕಾಣೆಯಾಗಿರುವ ಬಗ್ಗೆ ಪತ್ನಿ ಸವಿತಾ ದೂರು ದಾಖಲಿಸಿದ್ದು, ಆತನ ಪತ್ತೆಗಾಗಿ ಪೊಲೀಸರು ಹುಡುಕಾಡುತ್ತಿದ್ದಾರೆ. ವಧುವಿನ ಕುಟುಂಬದಿಂದ ಮದುವೆಗೆ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ವಿವಾಹದ ಬಳಿಕ ದಂಪತಿಗೆ ಪೊಲೀಸ್ ಭದ್ರತೆ ಒದಗಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ.