ಶಿರಸಿ, ಅ 31 (DaijiworldNews/DB): 70 ವರ್ಷದ ವೃದ್ಧರೊಬ್ಬರು ಡಿಪ್ಲೋಮಾ ಎಂಜಿನಿಯರಿಂಗ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಆ ಮೂಲಕ ಸಾಧನೆಗೆ ವಯಸ್ಸಿನ ಹಂಗಿಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಉತ್ತರ ಕನ್ನಡ ಜಿಲ್ಲೆ ಶಿರಸಿಯ ಸುಗಾವಿ ಗ್ರಾಮದ ನಾರಾಯಣ ಎಸ್. ಭಟ್ ಎಂಬವರೇ ಈ ಸಾಧನೆ ಮಾಡಿದ ವೃದ್ದ. 1973ರಲ್ಲಿ ಮೆಕ್ಯಾನಿಕಲ್ ಡಿಪ್ಲೋಮಾ ಎಂಜಿನಿಯರಿಂಗ್ ಪದವಿ ಪಡೆದಿದ್ದ ನಾರಾಯಣ ಭಟ್ ಅವರು, ದೇಶದ ವಿವಿಧೆಡೆ ಉದ್ಯೋಗ ನಿರ್ವಹಿಸಿ 2013ರಲ್ಲಿ ನಿವೃತ್ತರಾಗಿದ್ದರು. ಬಳಿಕ ಹುಟ್ಟೂರು ಶಿರಸಿಗೆ ಬಂದಿದ್ದರು. ಆದರೆ ಇಳಿ ವಯಸ್ಸಿನಲ್ಲಿಯೂ ಅವರ ಓದುವ ಹವ್ಯಾಸ ಕಡಿಮೆಯಾಗಿರಲಿಲ್ಲ.
ಮತ್ತೆ ಓದಬೇಕೆಂಬ ಆಸೆಯಿಂದ ಮುಂದಡಿಯಿಟ್ಟರು. ಆದರೆ ಅವರ ಪ್ರವೇಶಾತಿಗೆ ತಾಂತ್ರಿಕವಾಗಿ ಕೆಲವೊಂದು ತೊಡಕುಗಳು ಎದುರಾದರೂ ಅವುಗಳನ್ನು ಸರಿಪಡಿಸಿಕೊಂಡು 2019ರಲ್ಲಿ ತನ್ನ ಕನಸನ್ನು ನನಸಾಗಿಸಲು ಮುಂದಾದರು. ಶಿರಸಿಯ ಆರ್.ಎನ್. ಶೆಟ್ಟಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸಿವಿಲ್ ಡಿಪ್ಲೊಮಾ ಎಂಜಿನಿಯರಿಂಗ್ಗೆ ಸೇರಿದ ನಾರಾಯಣ ಭಟ್ ಈ ವರ್ಷ ಅಂತಿಮ ಪರೀಕ್ಷೆಯನ್ನು ಬರೆದಿದ್ದರು. ಅದರ ಫಲಿತಾಂಶ ಪ್ರಕಟಗೊಂಡಿದ್ದು, ಅವರು ಶೇ. 94 ಅಂಕಗಳೊಂದಿಗೆ ರಾಜ್ಯದಲ್ಲಿ ಪ್ರಥಮ ಸ್ಥಾನಿಯಾಗಿ ಹೊರ ಹೊಮ್ಮಿದ್ದಾರೆ.