ನವದೆಹಲಿ, ಅ 31 (DaijiworldNews/DB): ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ನನ್ನನ್ನು ಹರೇನ್ ಪಾಂಡ್ಯಾರಂತೆ ಮಾಡಲಾರರು ಎಂಬ ಭರವಸೆ ಹೊಂದಿದ್ದೇನೆ ಎಂದು ಬಿಜೆಪಿ ನಾಯಕ ಸುಬ್ರಹ್ಮಣಿಯನ್ ಸ್ವಾಮಿ ಹೇಳಿದ್ದಾರೆ.
ಟ್ವಿಟರ್ನಲ್ಲಿ ಈ ಹೇಳಿಕೆ ನೀಡಿರುವ ಅವರು, ಮೋದಿ, ಅಮಿತ್ ಶಾ ಸೇರಿ ನನ್ನನ್ನು ಹರೇನ್ ಪಾಂಡ್ಯಾರಂತೆ ಮಾಡಲಾರರು ಎಂಬ ಭರವಸೆ ಇದೆ. ಆದರೆ ಒಂದು ವೇಳೆ ಹಾಗಾದಲ್ಲಿ ನನ್ನ ಸ್ನೇಹಿತರನ್ನು ನಾನು ಎಚ್ಚರಿಸಬೇಕಾದ ಅಗತ್ಯವಿದೆ. ನಾನು ಪಡೆದಷ್ಟೂ ಉತ್ತಮವಾದದನ್ನು ನೀಡುತ್ತೇನೆ. ಇವರಿಬ್ಬರೂ ಆರೆಸ್ಸೆಸ್ನ ಉನ್ನತ ಅಧಿಕಾರದಲ್ಲಿರುವವರಿಗೆ ಕೂಡಾ ದ್ರೋಹ ಬಗೆದಿದ್ದಾರೆ ಎಂದಿದ್ದಾರೆ.
ಇನ್ನು ಸ್ವಾಮಿ ಟ್ವೀಟ್ಗೆ ಟ್ವಿಟರ್ ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದು, ಹಾಗಾದರೆ ಹರೇನ್ ಪಾಂಡ್ಯಾ ಕೊಲೆ ಪ್ರಕರಣದಲ್ಲಿ ಮೋದಿ ಮತ್ತು ಅಮಿತ್ ಶಾ ಪಾತ್ರವಿದೆ ಎಂಬುದು ನಿಮ್ಮ ಟ್ವೀಟ್ನ ಅರ್ಥವೇ ಎಂದು ಪ್ರಶ್ನಿಸಿದ್ದಾರೆ. ಆದರೆ ಇದಕ್ಕೆ ಹರೇನ್ ಪಾಂಡ್ಯಾರನ್ನು ಬಿಜೆಪಿಯಲ್ಲಿ ಸೈಡ್ಲೈನ್ ಮಾಡಲಾಗಿತ್ತು ಎಂದು ಸ್ವಾಮಿ ಮರು ಪ್ರತಿಕ್ರಿಯೆ ನೀಡಿದ್ದಾರೆ.
2002ರಲ್ಲಿ ನಡೆದ ಗುಜರಾತ್ ಹಿಂಸಾಚಾರ ಪ್ರಕರಣ ವೇಳೆ ಹರೇನ್ ಪಾಂಡ್ಯಾ ಗೃಹ ಮಂತ್ರಿಯಾಗಿದ್ದರು. ಈ ಘಟನೆ ನಡೆಯುವುದಕ್ಕೂ ಮುನ್ನ ನರೇಂದ್ರ ಮೋದಿಯವರು ಹಿರಿಯ ಅಧಿಕಾರಿಗಳ ಸಭೆ ಕರೆದಿದ್ದರು ಎಂಬುದಾಗಿ ಹರೇನ್ ಪಾಂಡ್ಯಾ ಅಂದು ಹೇಳಿಕೆ ನೀಡಿದ್ದು, ಆ ಬಳಿಕ ಅವರನ್ನು ಬಿಜೆಪಿಯಲ್ಲಿ ಮೂಲೆಗುಂಪು ಮಾಡಲಾಗಿತ್ತು ಎನ್ನಲಾಗಿದೆ. ಆ ಬಳಿಕ 2003ರಲ್ಲಿ ವಾಕಿಂಗ್ ತೆರಳಿದ್ದ ಪಾಂಡ್ಯಾರನ್ನು ದುಷ್ಕರ್ಮಿಗಳು ಕೊಲೆಗೈದಿದ್ದರು.