ನರ್ಮದಾ, ಅ 31 (DaijiworldNews/HR): ಬ್ರಿಟಿಷರ ಕಾಲದ ಮೊರ್ಬಿ ತೂಗು ಸೇತುವೆ ಭಾನುವಾರ ಸಂಜೆ ಕುಸಿದು ಕನಿಷ್ಠ 141 ಜನರು ಸಾವನ್ನಪ್ಪಿದ್ದು, ಗುಜರಾತ್ನಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಮೊರ್ಬಿಗೆ ಭೇಟಿ ನೀಡಲಿದ್ದು, ಸಂತಾಪ ಸೂಚಿಸಿದ್ದಾರೆ.
ಗುಜರಾತ್ನ ಕೆವಾಡಿಯಾದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ಗೌರವ ಸಲ್ಲಿಸಿದ ಬಳಿಕ ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ನಾನೀಗ ಏಕ್ತಾ ನಗರದಲ್ಲಿ ಇದ್ದೇನೆ. ಆದರೆ ನನ್ನ ಮನಸ್ಸು ಮೋರ್ಬಿ ಸಂತ್ರಸ್ತರ ಜೊತೆಗಿದೆ. ನನ್ನ ಜೀವನದಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯ ದೊಡ್ಡ ನೋವನ್ನು ಅನುಭವಿಸುತ್ತಿದ್ದೇನೆ. ಒಂದು ಕಡೆ ನೋವು, ಮತ್ತೊಂದು ಕಡೆ ಕರ್ತವ್ಯವಿದೆ ಎಂದಿದ್ದಾರೆ.
ಇನ್ನು ಅಪಘಾತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ನಾನು ಸಂತಾಪವನ್ನು ಸೂಚಿಸುತ್ತೇನೆ. ಈ ದುಃಖದ ಸಮಯದಲ್ಲಿ ಸರ್ಕಾರವು ಎಲ್ಲಾ ರೀತಿಯಲ್ಲೂ ದುಃಖಿತ ಕುಟುಂಬಗಳೊಂದಿಗೆ ಇದೆ ಎಂದರು.