ತಿರುವನಂತಪುರಂ, ಅ 31 (DaijiworldNews/DB): ಜ್ಯೋತಿಷಿಯ ಮಾತು ಕೇಳಿ ಯುವತಿಯೊಬ್ಬಳು ತನ್ನ ಪ್ರಿಯಕರನಿಗೆ ವಿಷಪ್ರಾಶನ ಮಾಡಿದ ಘಟನೆ ಕೇರಳದ ತಿರುವನಂತಪುರಂ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿ ಇತ್ತೀಚೆಗೆ ನಡೆದ ನರಬಲಿ ಪ್ರಕರಣ ಮಾಸುವ ಮುನ್ನವೇ ಮೌಢ್ಯಕ್ಕೆ ಮತ್ತೊಂದು ಬಲಿಯಾಗಿದೆ.
ತಮಿಳುನಾಡು-ಕೇರಳ ಗಡಿಯಲ್ಲಿರುವ ರಾಮವರಂ ಚಿರಾ ಎಂಬಲ್ಲಿನ ಶರೋನ್ ರಾಜ್ (22) ಕೊಲೆಯಾದ ದುರ್ದೈವಿ. ಸ್ನಾತಕೋತ್ತರ ಪದವಿ ಓದುತ್ತಿರುವ ಗ್ರೀಷ್ಮಾ (22) ಕೊಲೆ ಮಾಡಿದಾಕೆ. ಶರೋನ್ ರಾಜ್ ಮತ್ತು ಗ್ರೀಷ್ಮಾ ಪ್ರೀತಿಸುತ್ತಿದ್ದು, ನಿಶ್ಚಿತಾರ್ಥವೂ ನಡೆದು ಹೋಗಿತ್ತು. ಬಳಿಕ ಈ ಸಂಬಂಧ ಮುರಿದು ಬಿದ್ದು, ಗ್ರೀಷ್ಮಾಳಿಗೆ ಮತ್ತೊಬ್ಬ ಯುವಕನೊಂದಿಗೆ ಮದುವೆ ನಿಶ್ಚಯವಾಗಿತ್ತು. ಈ ನಡುವೆ ಜ್ಯೋತಿಷಿಯೊಬ್ಬ ಆಕೆಯ ಮೊದಲ ಪ್ರಿಯಕರ ಸಾವನ್ನಪ್ಪಿದರೆ ಮಾತ್ರ ಆಕೆ ನೆಮ್ಮದಿಯಿಂದಿರಬಹುದು ಎಂದು ಹೇಳಿದ್ದಾನೆ. ಇದನ್ನು ನಿಜವೆಂದು ತಿಳಿದ ಗ್ರೀಷ್ಮಾ ಉಪಾಯವಾಗಿ ಶರೋನ್ ರಾಜ್ನನ್ನು ತನ್ನ ಮನೆಗೆ ಕರೆಸಿಕೊಂಡು ಕಾಪರ್ ಸಲ್ಪೇಟ್ ಮಿಶ್ರಿತ ವಿಷವನ್ನು ಆಯುರ್ವೇದ ಔಷಧಿ ಎಂದು ಕುಡಿಸಿದ್ದಳು. ಆದರೆ ಆಕೆಯನ್ನು ನಂಬಿ ಅದನ್ನು ಕುಡಿದ ಶರೋನ್ ರಾಜ್ ಚಿಕಿತ್ಸೆ ಫಲಿಸದೆ ಅಕ್ಟೋಬರ್ 25 ರಂದು ಸಾವನ್ನಪ್ಪಿದ್ದಾನೆ.
ಇನ್ನು ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ ವಿಶೇಷ ಅಪರಾಧ ದಳಕ್ಕೆ ಗ್ರೀಷ್ಮಾಳೇ ವಿಷಪ್ರಾಶನ ಮಾಡಿರುವುದು ಗೊತ್ತಾಗಿದೆ. ಸದ್ಯ ಪ್ರಕರಣದ ತನಿಖೆ ಪ್ರಗತಿಯಲ್ಲಿದೆ ಎಂದು ತಿರುವನಂತಪುರ ಗ್ರಾಮೀಣ ಎಸ್ಪಿ ದಿವ್ಯಾ ಗೋಪಿನಾಥ್ ತಿಳಿಸಿದ್ದಾರೆ.
ಗ್ರೀಷ್ಮಾಳಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಶರೋನ್ ರಾಜ್ ಹೆತ್ತವರು ಆಗ್ರಹಿಸಿದ್ದಾರೆ. ಕೇರಳದ ಪಟ್ಟನಂತಿಟ್ಟುವಿನಲ್ಲಿ ಆರ್ಥಿಕ ಚೇತರಿಕೆಯಾಗುತ್ತದೆಂದು ನಂಬಿ ಇಬ್ಬರು ಮಹಿಳೆಯರನ್ನು ನರಬಲಿ ನೀಡಿದ ಪ್ರಕರಣ ಇತ್ತೀಚೆಗಷ್ಟೇ ನಡೆದಿತ್ತು.