ಪಾಟ್ನಾ, ಅ 31 (DaijiworldNews/DB): ಆರ್ಎಸ್ಎಸ್ ಕಾಫಿ, ಬಿಜೆಪಿ ಅದರ ನೊರೆಯಿದ್ದಂತೆ ಎಂದು ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಹೇಳಿದ್ದಾರೆ.
ಬಿಹಾರದಲ್ಲಿ 3,500 ಕಿಲೋ ಮೀಟರ್ ಪಾದಯಾತ್ರೆ ನಡೆಸುತ್ತಿರುವ ಕಿಶೋರ್ ಪಾದಯಾತ್ರೆ ಸಂದರ್ಭದಲ್ಲಿ ಮಾತನಾಡಿ, ಒಂದು ಕಪ್ ಕಾಫಿಯ ತುದಿಯಲ್ಲಿ ನೊರೆ ಇರುವಂತೆ ಬಿಜೆಪಿ ಕೂಡಾ. ಆರೆಸ್ಸೆಸ್ ಆ ಕಾಫಿಯ ನೊರೆಯ (ಬಿಜೆಪಿ) ಕೆಳಗೆ ಆಳವಾದ ಸಂರಚನೆಯನ್ನು ಹೊಂದಿದೆ. ಸಾಮಾಜಿಕವಾದ ಹೆಣೆಯುವಿಕೆಗಳ ಒಳಗೆ ತನ್ನ ದಾರಿಯನ್ನು ಬೇರೂರಿಸಿದೆ. ಅಂತಹ ಶಕ್ತಿಯನ್ನು ಅಡ್ಡದಾರಿ ಹಿಡಿದು ಪ್ರಸ್ತುತ ಸೋಲಿಸುವುದು ಅಸಾಧ್ಯ ಎಂದರು.
ಗಾಂಧೀಜಿಯವರ ಕಾಂಗ್ರೆಸ್ ಪುನಶ್ಚೇತನದಿಂದ ಮಾತ್ರ ಗೋಡ್ಸೆ ಸಿದ್ದಾಂತವನ್ನು ಸೋಲಿಸಬಹುದೆಂಬುದು ಬಹಳ ತಡವಾಗಿ ಅರ್ಥವಾಯಿತು. ನಿತೀಶ್ ಕುಮಾರ್ ಮತ್ತು ಜಗನ್ ಮೋಹನ್ ರೆಡ್ಡಿಯವರಂತವರಿಗೆ ಸಹಾಯ ಮಾಡುವ ಬದಲು ಅವರ ಮಹತ್ವಾಕಾಂಕ್ಷೆ ಅರ್ಥೈಸುವ ಕುರಿತು ತೊಡಗಿಸಿಕೊಂಡಿದ್ದರೆ ಒಳ್ಳೆಯದಿತ್ತು ಎಂದವರು ತಿಳಿಸಿದರು.
ನಾನು ಜೆಡಿಯು ರಾಷ್ಟ್ರೀಯ ಉಪಾಧ್ಯಕ್ಷನಾಗಿದ್ದ ವೇಳೆ ದೇಶಾದ್ಯಂತ ಸಿಎಎ- ಎನ್ಪಿಆರ್- ಎನ್ಸಿಆರ್ ವಿರುದ್ಧ ಪ್ರತಿಭಟನೆ ಜೋರಾಗಿತ್ತು. ಆದರೆ ಸಂಸತ್ನಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಪರ ನನ್ನ ಪಕ್ಷದ ಸಂಸದರು ಮತ ಚಲಾಯಿದ್ದಾರೆಂದು ತಿಳಿದು ಆಘಾತವಾಗಿತ್ತು. ಆದರೆ ಈ ಕುರಿತು ನಿತೀಶ್ಕುಮಾರ್ ಜೊತೆ ಮಾತನಾಡಿದಾಗ ನನಗೆ ಈ ಬಗ್ಗೆ ಅರಿವಿಲ್ಲ, ಬಿಹಾರದಲ್ಲಿ ಎನ್ಸಿಆರ್ಗೆ ಅವಕಾಶವಿಲ್ಲ ಎಂದಿದ್ದರು. ಅವರ ಇಬ್ಬಗೆ ನಿಲುವಿನಿಂದ ಬೇಸತ್ತು ಅವರೊಂದಿಗೆ ಕೆಲಸ ಮಾಡುವುದು ಅಸಾಧ್ಯ ಎಂದು ಅರಿತುಕೊಂಡೆ ಎಂದು ಪ್ರಶಾಂತ್ ಕಿಶೋರ್ ವಿವರಿಸಿದರು.