ಬೆಂಗಳೂರು, ಅ 30 (DaijiworldNews/DB): ಸ್ಯಾಂಡಲ್ವುಡ್ ಹಾಗೂ ಕಿರುತೆರೆ ನಟಿ ವಿನಯಾಪ್ರಸಾದ್ ಅವರ ಮನೆಯಲ್ಲಿ ಕಳ್ಳತನವಾಗಿರುವ ಸಂಬಂಧ ನಂದಿನಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪಾರು ಧಾರವಾಹಿಯಲ್ಲಿ ಅಖಿಲಾಂಡೇಶ್ವರಿ ಪಾತ್ರದಲ್ಲಿ ಮಿಂಚುತ್ತಿರುವ ನಟಿ ವಿನಯಾಪ್ರಸಾದ್ ಅವರು ಪತಿ ಜ್ಯೋತಿ ಪ್ರಕಾಶ್ ಅವರೊಂದಿಗೆ ಉಡುಪಿಗೆ ತೆರಳಿದ್ದ viವೇಳೆ ಘಟನೆ ನಡೆದಿದೆ. ಮನೆಯ ಬೆಡ್ರೂಂಗೆ ನುಗ್ಗಿದ ಕಳ್ಳರು ಅಲ್ಲಿದ್ದ 7 ಸಾವಿರ ರೂ.ಗಳನ್ನು ಕದ್ದು ಪರಾರಿಯಾಗಿದ್ದಾರೆ. ಮನೆಯಲ್ಲಿ ಇನ್ನೂ ಅನೇಕ ಬೆಲೆಬಾಳುವ ವಸ್ತುಗಳಿದ್ದು, ಅವುಗಳನ್ನೂ ಕದ್ದಿರುವ ಶಂಕೆ ವ್ಯಕ್ತವಾಗಿದೆ. ಅಕ್ಟೋಬರ್ 22 ರಂದು ಅವರು ತಮ್ಮ ಸ್ವಂತ ಊರಾದ ಉಡುಪಿಗೆ ಹೋಗಿದ್ದು, ಅಕ್ಟೋಬರ್ 26ರಂದು ಬೆಂಗಳೂರಿನಲ್ಲಿರುವ ತಮ್ಮ ಮನೆಗೆ ವಾಪಸ್ಸಾಗಿದ್ದಾರೆ. ಈ ವೇಳೆ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.
ಕೂಡಲೇ ನಂದಿನಿ ಬಡಾವಣೆ ಪೊಲೀಸ್ ಠಾಣೆಗೆ ತೆರಳಿ ನಟಿ ದೂರು ದಾಖಲು ಮಾಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಕಳ್ಳರ ಪತ್ತೆಗಾಗಿ ಬಲೆ ಬೀಸಿದ್ದಾರೆ ಎಂದು ತಿಳಿದು ಬಂದಿದೆ.