ಭಾವ್ನಗರ್, ಅ 30 (DaijiworldNews/DB): ಏಕರೂಪ ನಾಗರಿಕ ಸಂಹಿತೆಯನ್ನು ಗುಜರಾತ್ನಲ್ಲಿ ಜಾರಿಗೊಳಿಸುವ ವಿಚಾರದಲ್ಲಿ ಬಿಜೆಪಿ ಮೀನಾಮೇಷ ಎಣಿಸುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಗುಜರಾತ್ನ ಭಾವ್ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುಸಿಸಿಯನ್ನು ಜಾರಿಗೆ ತರುವುದಾಗಿ ಉತ್ತರಾಖಂಡ ವಿಧಾನಸಭಾ ಚುನಾವಣೆಪೂರ್ವದಲ್ಲಿ ಭರವಸೆ ನೀಡಿದ್ದ ಬಿಜೆಪಿ, ಬಳಿಕ ಅನುಷ್ಠಾನವನ್ನೇ ಮರೆತಿದೆ. ಚುನಾವಣೆಗೆ ಮೂರು ದಿನಕ್ಕೆ ಮೊದಲು ಇದಕ್ಕಾಗಿ ಸಮಿತಿ ರಚಿಸಿದ್ದ ಬಿಜೆಪಿ ಈಗ ಮಾಯವಾಗಿದೆ. ಇದೀಗ ಗುಜರಾತ್ನಲ್ಲಿಯೂ ಯುಸಿಸಿ ಜಾರಿಯ ನಾಟಕವಾಡುತ್ತಿದೆ ಎಂದು ವ್ಯಂಗ್ಯವಾಡಿದರು.
ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದ ಅವರು, ಇದು ಸರ್ಕಾರದ ಜವಾಬ್ದಾರಿಯೂ ಆಗಿದೆ. ಆದರೆ ಎಲ್ಲ ಸಮುದಾಯಗಳ ಒಪ್ಪಿಗೆ ಪಡೆದುಕೊಂಡು ಸಮಾಲೋಚನೆ ನಡೆಸಿಯೇ ಜಾರಿಗೆ ತರಬೇಕು ಎಂದರು.
ಇನ್ನು ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಆದರೆ ಅಲ್ಲಿ ಇನ್ನೂ ಈ ಸಂಹಿತೆ ಯಾಕೆ ಜಾರಿಯಾಗಿಲ್ಲ ಎಂದು ಪ್ರಶ್ನಿಸಿರುವ ಕೇಜ್ರೀವಾಲ್, ದೇಶಾದ್ಯಂತ ಯಾಕೆ ಇನ್ನೂ ಏಕರೂಪ ನಾಗರಿಕ ಸಂಹಿತೆ ಜಾರಿಯಾಗಿಲ್ಲ? ಬಹುಶಃ ಇನ್ನೊಂದು ಲೋಕಸಭಾ ಚುನಾವಣೆ ಬರಲಿ ಎಂದು ಕಾಯುತ್ತಿರಬಹುದು ಎಂದು ಲೇವಡಿ ಮಾಡಿದರು.